ADVERTISEMENT

ಅಂತರರಾಜ್ಯ ಪಾರ್ದಿ ಗ್ಯಾಂಗ್ ದರೋಡೆಕೊರರ ಬಂಧನ

ಹೈವೇ ಪಕ್ಕದ ಒಂಟಿ ಮನೆಗಳಲ್ಲಿ ದರೋಡೆ, ಕೊಲೆ ಮಾಡುತ್ತಿದ್ದ ಗ್ಯಾಂಗ್‌

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:39 IST
Last Updated 23 ಆಗಸ್ಟ್ 2019, 9:39 IST
ದಾವಣಗೆರೆಯ ಎಸ್‌ಪಿ ಕಚೇರಿಯಲ್ಲಿ ಗುರುವಾರ ಎಸ್‌ಪಿ ಹನುಮಂತರಾಯ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಚಿನ್ನದ ಆಭರಣಗಳನ್ನು ಪ್ರದರ್ಶಿಸಿದರು
ದಾವಣಗೆರೆಯ ಎಸ್‌ಪಿ ಕಚೇರಿಯಲ್ಲಿ ಗುರುವಾರ ಎಸ್‌ಪಿ ಹನುಮಂತರಾಯ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಚಿನ್ನದ ಆಭರಣಗಳನ್ನು ಪ್ರದರ್ಶಿಸಿದರು   

ದಾವಣಗೆರೆ: ಶಾಮನೂರು ಡಾಲರ್ಸ್ ಕಾಲೊನಿಯ ತಿಮ್ಮರೆಡ್ಡಿ ಶಾಲೆ ಬಳಿ ಜುಲೈ 20ರಂದು ನಡೆದ ದರೋಡೆ ಪ್ರಕರಣ ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಲೊನಿ ನಿವಾಸಿ ಚಂದ್ರಕಲಾ ಚಂದ್ರಶೇಖರಪ್ಪ ಅವರ ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿದ್ದ 6 ಜನರಿದ್ದ ದರೋಡೆಕೋರರ ತಂಡ ಚಂದ್ರಕಲಾ ಹಾಗೂ ಅವರ ಪುತ್ರನ ಕೈಕಾಲುಗಳನ್ನು ಕಟ್ಟಿ 83ಗ್ರಾಂ ಬಂಗಾರದ ಆಭರಣಗಳನ್ನು ದರೋಡೆ ಮಾಡಿತ್ತು. ಇದು ನಗರದ ಜನರಲ್ಲಿ ಭಯ ಮೂಡಿಸಿತ್ತು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಘಟನೆ ನಡೆದ ಒಂದು ತಿಂಗಳಲ್ಲೇ 3 ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಪ್ರಕರಣದ ವಿವರ:

ಪ್ರಕರಣವನ್ನು ಭೇದಿಸಲು ಮೂರು ತಂಡಗಳನ್ನು ರಚಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ತಿಮ್ಮಣ್ಣ, ಸಿಪಿಐ ಲಕ್ಷ್ಮಣ್ ನಾಯ್ಕ, ಹದಡಿ ಪೊಲೀಸ್ ಠಾಣೆಯ ಪಿಎಸ್ಐ ಪ್ರಸಾದ್ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ಆಗಸ್ಟ್‌ 17 ರಂದು ಆರೋಪಿಗಳಾದ ಮಹಾರಾಷ್ಟ್ರದ ಮೋಹನ ರಾಮದೇವ ಕಾಳೆ, ದಶರಥ ಗಣಪತಿ ಕಾಳೆ, ಲಕ್ಕನ್ ಕಾಳೆ ಅವರನ್ನು ಬಂಧಿಸಿತ್ತು.

7 ಜನರ ತಂಡದೊಂದಿಗೆ ಲಾರಿಯಲ್ಲಿ ಬಂದು ಕೃತ್ಯವೆಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು. ಅಲ್ಲದೆ ರಾಜ್ಯದ ವಿವಿಧ ಜಿಲ್ಲೆ ಮತ್ತು ಆಂಧ್ರಪ್ರದೇಶದಲ್ಲಿಯೂ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಬಾಗೇಪಲ್ಲಿಯಲ್ಲಿ ದರೋಡೆ ಮಾಡಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದರು. ಉಳಿದ 4 ಜನ ಆರೋಪಿಗಳ‌ನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್‌‍ಪಿ ತಿಳಿಸಿದರು.

ಆರೋಪಿಗಳಿಂದ ₹7.59 ಲಕ್ಷ ಮೌಲ್ಯದ 253 ಗ್ರಾಂ ಬಂಗಾರದ ಆಭರಣ, ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ₹ 10 ಲಕ್ಷದ ಲಾರಿ ಸೇರಿ ಒಟ್ಟು ₹17.59 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲೆ ಹಾಗೂ ದರೋಡೆ ಪ್ರಕರಣ:

ವಿದ್ಯಾನಗರ ಪೊಲೀಸ್ ಠಾಣೆಯ 1 ದರೋಡೆ ಪ್ರಕರಣ ಮತ್ತು 1 ಮನೆ ಕಳವು ಪ್ರಕರಣ.
ಕಲಬುರ್ಗಿ ಜಿಲ್ಲೆಯ ಜೇವರ್ಗಿ ಠಾಣೆಯಲ್ಲಿ 1 ದರೋಡೆ ಪ್ರಕರಣ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ 1 ದರೋಡೆ, ಬಾಗೇಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಕೊಲೆ ಹಾಗೂ ದರೋಡೆ, ಕೂಡ್ಲಿಗಿ ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ 1 ದರೋಡೆ ಪ್ರಕರಣದಲ್ಲಿ ತಂಡ ಭಾಗಿಯಾಗಿತ್ತು.

ಎಸ್‌ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ರಾಜೀವ್, ಡಿವೈಎಸ್‌ಪಿ ನಾಗರಾಜ, ಗ್ರಾಮಾಂತರ ಡಿವೈಎಸ್‌ಪಿ ಎಂ.ಕೆ. ಗಂಗಲ್, ಪ್ರೊಬೆಷನರಿ ಡಿವೈಎಸ್‌ಪಿ ದೇವರಾಜ್ , ಸಿಇಎನ್ ಪೊಲೀಸ್ ಠಾಣೆಯ ಪಿ.ಐ. ದೇವರಾಜ್, ಪಿಎಸ್ಐ ರೂಪ ತೆಂಬದ್, ಎಎಸ್ಐ ಆಂಜನಪ್ಪ, ಸಿಬ್ಬಂದಿ ಮಜೀದ್ ಕೆ.ಸಿ, ಆಂಜನೇಯ, ರಾಘವೇಂದ್ರ, ರಮೇಶ್ ನಾಯ್ಕ, ತಿಪ್ಪೇಸ್ವಾಮಿ ಕೆ.ಎಲ್, ಲೋಕಾನಾಯ್ಕ, ಚಂದ್ರಪ್ಪ, ವಿಶ್ವನಾಥ, ಮಂಜುನಾಥ, ತಿಮ್ಮಣ್ಣ, ಯೋಗೀಶ್ ನಾಯ್ಕ, ಬಸವರಾಜ್, ಕಣ್ಣಪ್ಪ, ಮಂಜುನಾಥ, ನಾಗರಾಜ, ಗೋಪಿನಾಥ ಬಿ ನಾಯ್ಕ, ನರೇಂದ್ರ, ಸಿಬ್ಬಂದಿ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.