ದಾವಣಗೆರೆ: ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಮುಕ್ತಾಯಗೊಂಡ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನಿಸ್ಬಾಲ್ (ಲೀಗ್ ಕಂ ನಾಟೌಟ್) ಪಂದ್ಯಾವಳಿಯಲ್ಲಿ ಉಡುಪಿ ಜಿಲ್ಲೆಯ ಮಲ್ಪೆಯ ರಿಯಲ್ ಫೈಟರ್ಸ್ ತಂಡ ಶಾಮನೂರು ಡೈಮಂಡ್ ಕಪ್ ಅನ್ನು ಪಡೆದುಕೊಂಡಿತು.
ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿಗಾಗಿ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ವತಿಯಿಂದ ನಡೆದ ಈ ಟೂರ್ನಿಯಲ್ಲಿ ರಿಯಲ್ ಫೈಟರ್ಸ್ ತಂಡ ಬೆಂಗಳೂರಿನ ನ್ಯಾಶ್ ತಂಡವನ್ನು 15 ರನ್ಗಳಿಂದ ಮಣಿಸುವ ಮೂಲಕ ಕಪ್ ಅನ್ನು ತನ್ನದಾಗಿಸಿಕೊಂಡಿತು.
ಅಂತಿಮ ಪಂದ್ಯದಲ್ಲಿ ನ್ಯಾಶ್ ತಂಡ ರನ್ನರ್ ಆಪ್ ಶಿವಗಂಗಾ ಕಪ್ ಅನ್ನು ಪಡೆಯಿತು. ಸೆಮಿಫೈನಲ್ ಪ್ರವೇಶಿಸಿದ ದಾವಣಗೆರೆ ಹೀರೊ ತಂಡ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಭಾನುವಾರ ರಾತ್ರಿ ತುಂತುರು ಮಳೆಯ ಮಧ್ಯೆಯೂ ಸಾವಿರಾರು ಕ್ರೀಡಾಭಿಮಾನಿಗಳು ಫೈನಲ್ ಪಂದ್ಯವನ್ನು ವೀಕ್ಷಿಸಿದರು.
ಆಫಿಷಿಯಲ್ ಕಪ್ಗಾಗಿ ನಡೆದ ಪಂದ್ಯಾವಳಿಯಲ್ಲಿ ಜಿಲ್ಲಾ ಪೊಲೀಸ್ ತಂಡ ವರ್ತಕರ ತಂಡವನ್ನು ಮಣಿಸುವ ಮೂಲಕ ಪ್ರಥಮ ಸ್ಥಾನ ಪಡೆಯಿತು.
ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ಜಾಕೀರ್, ಶಿವಗಂಗಾ ಶ್ರೀನಿವಾಸ್, ಶಿವಗಂಗಾ ಬಸವರಾಜ್, ಮಹಾದೇವ್, ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ದವನ ವಿರೇಶ್, ಎನ್ಎಂಜೆಬಿ ಮುರುಗೇಶ್, ಅಯೂಬ್ ಪೈಲ್ವಾನ್, ಸಿಪಿಐ ಡಾ.ಎಸ್.ಕೆ. ಶಂಕರ್, ಪಿ.ಸಿ. ರಾಮನಾಥ್, ರವಿಕುಮಾರ್ ಗಾಂಧಿ, ಸುರಭಿ ವಿನಯ್, ಶಿವು, ವಿರೂಪಾಕ್ಷಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.