ADVERTISEMENT

ದಾವಣಗೆರೆ: ರೈತರಿಗೆ ಉಚಿತ ಪರಿಕರ ವಿತರಣೆ

ಕೃಷಿ ಇಲಾಖೆಯಿಂದ ಕಾಡಜ್ಜಿಯಲ್ಲಿ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 3:18 IST
Last Updated 20 ಸೆಪ್ಟೆಂಬರ್ 2020, 3:18 IST
ಕೃಷಿ ಇಲಾಖೆಯಿಂದ ಕಾಡಜ್ಜಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತ ಪರಿಕರ ವಿತರಣೆ ಮಾಡಲಾಯಿತು
ಕೃಷಿ ಇಲಾಖೆಯಿಂದ ಕಾಡಜ್ಜಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತ ಪರಿಕರ ವಿತರಣೆ ಮಾಡಲಾಯಿತು   

ದಾವಣಗೆರೆ: ಕೃಷಿ ಇಲಾಖೆಯಿಂದ ಕಾಡಜ್ಜಿ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತ ಪರಿಕರ ವಿತರಣೆ ಹಾಗೂ ಆತ್ಮ ಯೋಜನೆಯಡಿ ಮಣ್ಣು ಆರೋಗ್ಯ ಮತ್ತು ಅಂತರ ಬೆಳೆಯಾಗಿ ದ್ವಿದಳ ಧಾನ್ಯ ಬೆಳೆಗಳ ಮಹತ್ವ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾಡಜ್ಜಿ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯ ಆಶಾ ಮುರಳಿ, ‘ಕೊರೊನಾ ಭೀತಿಯ ನಡುವೆಯೂ ಸರ್ಕಾರದ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ವಿಚಾರಗಳ ಕುರಿತು ವಿಜ್ಞಾನಿಗಳನ್ನು ಕರೆದುಕೊಂಡು ಬಂದು ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಣ್ಣು ಆರೋಗ್ಯ, ಮಣ್ಣು ಪರೀಕ್ಷೆ, ಅದಕ್ಕನುಗುಣವಾಗಿ ಪೋಷಕಾಂಶಗಳ ಬಳಕೆ, ಬೆಳೆ ಪರಿವರ್ತನೆ, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರಗಳ ಬಳಕೆ ವಿವಿಧ ಬೆಳೆಗಳಲ್ಲಿ ಬರಬಹುದಾದ ರೋಗ, ಕೀಟಗಳ ನಿರ್ವಹಣೆ ಕುರಿತು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸಣ್ಣಗೌಡರು ಮಾಹಿತಿ ನೀಡಿದರು.

ADVERTISEMENT

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನಗೌಡ ಎಚ್.ಕೆ., ಎನ್‌ಎಫ್‌ಎಸ್‌ಎಂ ಯೋಜನೆಯಡಿ ಬರುವ ಫಲಾನುಭವಿಗಳಿಗೆ ಪ್ರಾತ್ಯಕ್ಷಿಕೆ ನೀಡಿ, ವಿಸ್ತೀರ್ಣಕ್ಕನುಗುಣವಾಗಿ ಪರಿಕರಗಳನ್ನು ವಿತರಣೆ ಮಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಗಿ, ಜೋಳ, ಸಿರಿಧಾನ್ಯಗಳಾದ ನವಣೆ, ಕೊರಲೆ, ದ್ವಿದಳ ಧಾನ್ಯ ಬೆಳೆಗಳಾದ ತೊಗರಿ, ಹೆಸರು, ಅಲಸಂದೆ ಬೆಳೆಗಳನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಉಚಿತವಾಗಿ ಪರಿಕರಗಳನ್ನು ನೀಡುತ್ತಿವೆ. ರೈತರು ಈ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಆಹಾರ ಉತ್ಪಾದನೆಯನ್ನು ಹೆಚ್ಚು ಮಾಡಬೇಕು ಎಂದು
ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕರಾದ ರೇಖಾ, ಪ್ರತಿಭಾ, ಕೃಷಿ ಅಧಿಕಾರಿ ಲಾವಣ್ಯ, ಸಹಾಯಕ ಕೃಷಿ ಅಧಿಕಾರಿಗಳಾದ ದುರುಗಪ್ಪ, ಯೋಗೇಶಪ್ಪ, ವಸಂತಕುಮಾರ್, ಆತ್ಮ ಸಿಬ್ಬಂದಿ ವೆಂಕಟೇಶ್, ರೈತ ಅನುವುಗಾರರಾದ ರಾಜಪ್ಪ, ಸಿದ್ದಲಿಂಗಪ್ಪ, ಪ್ರಗತಿ ಪರ ರೈತರಾದ ಹನುಮಂತಪ್ಪ, ಚಂದ್ರಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.