ದಾವಣಗೆರೆ: ಇದೇ 10ರಂದು ನಡೆಯುವ ಈದ್ ಮಿಲಾದ್ ಹಾಗೂ ನ.12ರಂದು ನಡೆಯುವ ಮಹಾನಗರ ಪಾಲಿಕೆ ಚುನಾವಣೆಗೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನ.10ರಂದು ಮಧ್ಯಾಹ್ನ ಎರಡು ಗಂಟೆಗೆ ಈದ್ ಮಿಲಾದ್ ಕಮಿಟಿ, ತಂಜಿಮುಲ್ ಮುಸ್ಲೀಮಿನ್ ಫಂಡ್ ಅಸೋಸಿಯೇಷನ್ವತಿಯಿಂದ ಆಡಳಿತಾಧಿಕಾರಿ ರಶೀದ್ಖಾನ್, ತಂಜಿಂ ಕಮಿಟಿ ಆಧ್ಯಕ್ಷ ಸಾಧಿಕ್ ಪೈಲ್ವಾನ್, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಅತಾವುಲ್ಲಾ ರಜ್ವಿ ಕಾರ್ಯದರ್ಶಿ ಯಾಸಿನ್ ಪೀರ್ ರಜ್ವಿ ಅವರ ನೇತೃತ್ವದಲ್ಲಿ ಈದ್ ಮಿಲಾದ್ ನಡೆಯಲಿದೆ’ ಎಂದರು.
ಮುಖ್ಯ ಮೆರವಣಿಗೆಯು ಮೆಕ್ಕಾ ಮದೀನ, ಗುಂಬಜ್ಗಳೊಂದಿಗೆ ನಗರದ ಮದೀನಾ ಆಟೊ ನಿಲ್ದಾಣದಿಂದ ಹೊರಡಲಿದ್ದು, ಪ್ರಮುಖ ರಸ್ತೆಗಳ ಮೂಲಕ ಮಾಗನಹಳ್ಳಿರಸ್ತೆ, ಮಂಡಕ್ಕಿಭಟ್ಟಿ ಮಿಲಾದ್ ಮೈದಾನದಲ್ಲಿ ಮುಕ್ತಾಯಗೊಳ್ಳುತ್ತದೆ. ಇದಲ್ಲದೇ ವಿನೋಬ ನಗರ ಹಾಗೂ ಕೆಟಿಜೆ ನಗರಗಳಿಂದ ಪ್ರತ್ಯೇಕ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
‘ವಿನೋಬ ನಗರದ ಮೆರವಣಿಗೆಯು ವಿನೋಬ ನಗರ 2ನೇ ಮುಖ್ಯ ರಸ್ತೆಯಿಂದ ಆರಂಭವಾಗಲಿದ್ದು, ಪಿ.ಬಿ. ರಸ್ತೆಯ ಮೂಲಕ ಅರುಣಾ ಸರ್ಕಲ್ಗೆ ಬಂದು ಸೇರುವುದು. ಕೆಟಿಜಿ ನಗರದ ಮೆರವಣಿಗೆಯು ಕೆಟಿಜೆ ನಗರ 8ನೇ ಕ್ರಾಸ್ನಿಂದ ವಿದ್ಯಾರ್ಥಿ ಭವನ, ಕೆಇಬಿ ಸರ್ಕಲ್, ಜಯದೇವ ವೃತ್ತಗಳ ಮುಖಾಂತರ ಎಂ.ಜಿ. ಸರ್ಕಲ್ವರೆಗೆ ಒಂದು ಮುಖ್ಯ ಮೆರವಣಿಗೆ ಹೊರಡುವ ಮದೀನ ಆಟೊ ನಿಲ್ದಾಣಕ್ಕೆ ಸೇರಿಕೊಳ್ಳುತ್ತದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಹೇಳಿದರು.
ಡಿಎಸ್ಪಿ ನಾಗೇಶ್ ಐತಾಳ್, ಸಿಪಿಐಗಳಾದ ತಿಮ್ಮಣ್ಣ, ಗಜೇಂದ್ರಪ್ಪ, ಮಹಿಳಾ ಠಾಣೆ ಎಸ್ಐ ನಾಗಮ್ಮ ಕೆ. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.