ದಾವಣಗೆರೆ: ಆಹಾರದ ಒಂದಗಲೂ ಬಿಸಾಕಬಾರದು. ನಿಮಗೆ ಎಷ್ಟು ಬೇಕೋ ಅಷ್ಟೇ ತೆಗೆದುಕೊಳ್ಳಿ. ಉಳಿಸುವಷ್ಟು ಪ್ರಸಾದ ಹಾಕಿಸಿಕೊಳ್ಳಬೇಡಿ. ಇದುವೇ ಬಸವ ತತ್ವ. ಇದೇ ರಾಷ್ಟ್ರೀಯ ಆಹಾರ ತತ್ವ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ವಿಶ್ವಧರ್ಮ ಪ್ರವಚನ ಸಮಿತಿ ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾನುವಾರ ಅವರು ಪ್ರವಚನ ನೀಡಿದರು.
ಅನ್ನ, ಅರಿವೆ, ಅರಿವು, ಆಶ್ರಯ, ಔಷಧ ಇದುವೇ ಮೂಲ ಅಗತ್ಯಗಳು ಎಂದು ತಿಳಿಸಿದರು.
ಮಠ ಕಟ್ಟಿಕೊಂಡ ಸನ್ಯಾಸಿಗಿಂತ, ಕಾಡಿಗೆ ಹೋಗಿ ತಪಸ್ಸು ಮಾಡುವ ಸನ್ಯಾಸಿಗಿಂತ, ಮಣ್ಣು, ಹೆಣ್ಣು, ಹೊನ್ನು ಮಾಯೆ ಎನ್ನುವ ಸನ್ಯಾಸಿಗಿಂತ ಸತ್ಯಶುದ್ಧ ಕಾಯಕ ಮಾಡುವ ಗ್ರಹಸ್ಥರು ಮೇಲು. ನಾಗರಿಕತೆಯ ಮೂಲ ಕುಟುಂಬದಲ್ಲಿದೆ. ಕುಟುಂಬವೇ ಸಮಾಜ. ಸ್ವಾಮೀಜಿ ಕೂಡ ದೇಶದ ಒಳಗೆ ಸತ್ಪ್ರಜೆ ಅಷ್ಟೇ. ತಪ್ಪು ಮಾಡದೇ ಇರುವವ ಸನ್ಯಾಸಿ ಎಂದಲ್ಲ. ಸತ್ಯದ ದಾರಿಯಲ್ಲಿ ನಡೆಸುವವ ಸನ್ಯಾಸಿ ಎಂಬುದನ್ನು ತಿಳಿಯಬೇಕು ಎಂದರು.
ಸಂಸಾರಕ್ಕೆ ಸಂಸ್ಕಾರ ಇಲ್ಲದಿದ್ದರೆ ಸಂಹಾರ ಆಗಿ ಬಿಡುತ್ತದೆ. ಅದಕ್ಕೆ ಮಾರ್ಗದರ್ಶನ ಮಾಡಲು, ಗೊಂದಲಗಳನ್ನು ದೂರ ಮಾಡಲು ಗುರುಬೇಕು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.