ADVERTISEMENT

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ದೋಂಡಿಯಾವಾಘ: ಶಿವಾಚಾರ್ಯ ಸ್ವಾಮೀಜಿ

ಚನ್ನಗಿರಿ: ದೋಂಡಿಯಾವಾಘರ ಸಂಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 13:35 IST
Last Updated 10 ಸೆಪ್ಟೆಂಬರ್ 2024, 13:35 IST
ಚನ್ನಗಿರಿಯಲ್ಲಿ ಮಂಗಳವಾರ ನಡೆದ ದೋಂಡಿಯಾವಾಘರ ಸಂಸ್ಮರಣೆ ಕಾರ್ಯಕ್ರಮವನ್ನು ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಚನ್ನಗಿರಿಯಲ್ಲಿ ಮಂಗಳವಾರ ನಡೆದ ದೋಂಡಿಯಾವಾಘರ ಸಂಸ್ಮರಣೆ ಕಾರ್ಯಕ್ರಮವನ್ನು ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು    

ಚನ್ನಗಿರಿ: ‘ಅಪ್ಪಟ ಕನ್ನಡಿಗರಾದ ದೋಂಡಿಯಾವಾಘ ಚನ್ನಗಿರಿಯ ಮರಾಠ ಪವಾರ್ ಮನೆತನದಲ್ಲಿ 1745ರಲ್ಲಿ ಜನಿಸಿ ಸಣ್ಣ ವಯಸ್ಸಿಯನಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ವೀರರಾಗಿದ್ದರು’ ಕೇದಾರಶಾಖಾ ಮಠ ಹಿರೇಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಎಂದು ತಿಳಿಸಿದರು.

ಪಟ್ಟಣದ ಕನ್ನಡನಾಡು ಹಿತ ರಕ್ಷಣಾ ಸಮಿತಿ ಹಾಗೂ ಕ್ಷತ್ರಿಯ ಮರಾಠ ಸಮಾಜದ ಸಹಯೋಗದಲ್ಲಿ ಕ್ಷತ್ರಿಯ ಮರಾಠ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ದೋಂಡಿಯಾವಾಘರ 224ನೇ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರ ದಾಖಲೆಗಳ ಪ್ರಕಾರವೇ ದೋಂಡಿಯಾವಾಘ 90,000 ಅಶ್ವದಳ ಹಾಗೂ 24,000ಕ್ಕೂ ಹೆಚ್ಚು ಪದಾತಿದಳವನ್ನು ಹೊಂದಿದ್ದರು. ಅವರ ಚಟುವಟಿಕೆಗಳು ಶಿಕಾರಿಪುರದಿಂದ ಹಿಡಿದು ಬೆಳಗಾವಿ ಮತ್ತು ಕೊಲ್ಲಾಪುರದ ಗಡಿಯವರೆಗೆ, ನಿಜಾಮರ ಪ್ರದೇಶಗಳಲ್ಲಿ, ಕರಾವಳಿ ಜಿಲ್ಲೆಗಳಲ್ಲೂ ವ್ಯಾಪಿಸಿತ್ತು ಎಂದು ಇತಿಹಾಸದ ದಾಖಲೆಗಳಿವೆ. ತನ್ನ ಜೀವನದ ಕೊನೆ ಉಸಿರುವವರೆಗೂ ಹೋರಾಡಿದ ದೋಂಡಿಯಾವಾಘ 1800ನೇ ಸೆ. 10ರಂದು ನಡೆದ ಯುದ್ಧದಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದರು’ ಎಂದು ಹೇಳಿದರು.

ADVERTISEMENT

ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ತಿರುಮಲ ರಾವ್ ಮಾತನಾಡಿ, ಇಂತಹ ಅಪ್ರತಿಮ ವೀರನ ಹೆಸರನ್ನು ಶಾಶ್ವತಗೊಳಿಸಲು ಚನ್ನಗಿರಿಯ ದೊಡ್ಡಹುಲಿ ಕೆರೆ ಸಂಕೀರ್ಣಕ್ಕೆ ದೋಂಡಿಯಾವಾಘರ ಹೆಸರನ್ನು ಇಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಕ್ಷತ್ರಿಯ ಮರಾಠ ಸಮಾಜದ ಗೌರವಾಧ್ಯಕ್ಷ ಮಂಜುನಾಥ್ ಜಾಧವ್, ಅಧ್ಯಕ್ಷ ಶಿವಾಜಿರಾವ್ ಜಾಧವ್, ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಸತೀಶ್ ಪವಾರ್, ಕನ್ನಡನಾಡು ಹಿತ ರಕ್ಷಣಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣೋಜಿರಾವ್, ನಗರ ಘಟಕದ ಅಧ್ಯಕ್ಷ ಕೆ.ಆರ್. ನಟರಾಜ್ ರಾಯ್ಕರ್, ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಲಿಂಗರಾಜ್, ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಚಿನ್ನಸ್ವಾಮಿ, ಡಾ.ಸುದೀಂದ್ರ ನಾರಾಯಣ ಜೋಯ್ಸ್ ಉಪಸ್ಥಿತರಿದ್ದರು.

ತಾಲ್ಲೂಕಿನ ಮಾದೇನಹಳ್ಳಿ ಗ್ರಾಮದ ಮಾಜಿ ಸೈನಿಕ ಎಂ.ಶ್ರೀನಿವಾಸ್ ಹಾಗೂ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಎಚ್.ನವೀನ್ ಕಿಶೋರ್ ಅವರಿಗೆ ದೋಂಡಿಯಾವಾಘ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡನಾಡು ಹಿತ ರಕ್ಷಣಾ ಸಮಿತಿ ಗೌರವಾಧ್ಯಕ್ಷ ಸರ್ದಾರ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.