ಹರಿಹರ: ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ತಾಲ್ಲೂಕಿನ ಬಿಜೆಪಿ ಮುಖಂಡರು ಶುಕ್ರವಾರ ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮೌನ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ಧೋರಣೆ ಖಂಡಿಸುವ ಘೋಷಣೆಯುಳ್ಳ ಭಿತ್ತಿಪತ್ರಗಳನ್ನು ಹಿಡಿದು, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಅರ್ಧ ಗಂಟೆ ಕಾಲ ಆಸ್ಪತ್ರೆ ಎದುರು ಆವರಣದಲ್ಲಿ ಹಾಕಿದ್ದ ಟೆಂಟ್ನಲ್ಲಿ ಕುಳಿತು ಪ್ರತಿಭಟಿಸಿದರು.
15 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಬಡವರಿಗೆ ವರದಾನವಾಗಿದ್ದು, ಈವರೆಗೆ ಅಂದಾಜು ₹30 ಕೋಟಿಗೂ ಅಧಿಕ ಹಣ ಬಡವರಿಗೆ ಉಳಿತಾಯವಾಗಿದೆ. 5 ಲಕ್ಷಕ್ಕೂ ಅಧಿಕ ಜನರು ಇದರ ಸದುಪಯೋಗ ಪಡೆದಿದ್ದಾರೆ ಎಂದು ಪಕ್ಷದ ಮುಖಂಡ ಎಸ್.ಎಂ.ವೀರೇಶ್ ಹೇಳಿದರು.
ಔಷಧಿ ಮಾರಾಟಗಾರರ ಜಾಲದೊಂದಿಗೆ ಕೈಜೋಡಿಸಿರುವ ಕಾಂಗ್ರೆಸ್ ಸರ್ಕಾರ ಅವರಿಂದ ಹಣ ಪಡೆದು ಜನೌಷಧಿ ಕೇಂದ್ರ ಬಂದ್ ಮಾಡುತ್ತಿದೆ ಎಂದು ಮುಖಂಡ ಚಂದ್ರಶೇಖರ್ ಪೂಜಾರ್ ಹೇಳಿದರು.
ನಗರಸಭೆ ಸದಸ್ಯರಾದ ಆಟೊ ಹನುಮಂತಪ್ಪ, ಅಶ್ವಿನಿ ಕೃಷ್ಣ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಐರಣಿ, ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಪಿ.ಲಿಂಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ಮಂಜಾನಾಯ್ಕ, ತುಳಜಪ್ಪ ಭೂತೆ, ಮುಖಂಡರಾದ ರಾಜು ರೋಖಡೆ, ಬಾತಿ ಚಂದ್ರಶೇಖರ್, ರಾಘವೇಂದ್ರ ಉಪಾಧ್ಯ, ಮಾಲತೇಶ್ ಜಿ. ಭಂಡಾರಿ, ರೂಪಾ ಕಾಟ್ವೆ, ಸಾಕ್ಷಿ ಸಿಂಧೆ, ಅಂಬುಜಾ ರಾಜೋಳಿ, ರಶ್ಮಿ, ಸುಧಾ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.