ADVERTISEMENT

₹ 24.83 ಕೋಟಿ ವೆಚ್ಚದಲ್ಲಿ 351 ಮನೆ ನಿರ್ಮಾಣ: ಶಾಸಕ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 5:30 IST
Last Updated 22 ಏಪ್ರಿಲ್ 2022, 5:30 IST
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಭೂಮಿ ಪೂಜೆ ನೆರವೇರಿಸಿದರು.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಭೂಮಿ ಪೂಜೆ ನೆರವೇರಿಸಿದರು.   

ಹೊನ್ನಾಳಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕೊಳೆಗೇರಿಗಳಲ್ಲಿ ₹ 24.83 ಕೋಟಿ ವೆಚ್ಚದಲ್ಲಿ 351 ಮನೆಗಳ ನಿರ್ಮಾಣಕ್ಕೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ನಗರದ ತುಂಗಭದ್ರಾ ಬಡಾವಣೆಯಲ್ಲಿನ ವಸತಿ ಇಲಾಖೆ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹೊನ್ನಾಳಿ ಪಟ್ಟಣದಲ್ಲಿ 13 ಘೋಷಿತ ಕೊಳೆಗೇರಿಗಳಿದ್ದು 1,133 ಕುಟುಂಬಗಳು ವಾಸವಾಗಿವೆ. ಒಟ್ಟು 5,242 ಜನಸಂಖ್ಯೆ ಹೊಂದಿವೆ. ನ್ಯಾಮತಿ ಪಟ್ಟಣದಲ್ಲಿ 2 ಘೋಷಿತ ಕೊಳೆಗೇರಿಗಳಿದ್ದು 518 ಕುಟುಂಬಗಳು ವಾಸವಾಗಿವೆ. 1,993 ಜನಸಂಖ್ಯೆ ಹೊಂದಿವೆ ಎಂದು ಹೇಳಿದರು.

ADVERTISEMENT

ನಗರೋತ್ಥಾನ ಯೋಜನೆಯಡಿ ₹ 10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ದುರ್ಗಿಗುಡಿ ದಕ್ಷಿಣ ಭಾಗದ 5, 6, ಹಾಗೂ 7ನೇ ಕ್ರಾಸ್‍ನ ರಸ್ತೆ ಹಾಗೂ ಉತ್ತರ ಭಾಗದ ವಿವಿಧ ರಸ್ತೆಗಳನ್ನು ಅಭಿವೃಧ್ಧಿಪಡಿಸಲಾಗುವುದು. ₹ 7.5 ಕೋಟಿ ವೆಚ್ಚದಲ್ಲಿ ಟಿ.ಬಿ. ವೃತ್ತದಿಂದ ದಿಡಗೂರು ಪ್ರೊ.ಬಿ. ಕೃಷ್ಣಪ್ಪ ನಗರದವರೆಗೆ ರಸ್ತೆ ವಿಸ್ತರಣೆ, ಡಿವೈಡರ್ ನಿರ್ಮಾಣ, ಆಲಂಕಾರಿಕ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.

₹ 25 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಹಾಗೂ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಪುರಸಭೆ ಅಧ್ಯಕ್ಷ ಬಾಬು ಹೋಬಳದಾರ್, ಉಪಾಧ್ಯಕ್ಷೆ ರಂಚಿತಾಚನ್ನಪ್ಪ, ಸದಸ್ಯರಾದ ರಂಗನಾಥ, ಮೈಲಪ್ಪ, ಧರ್ಮಪ್ಪ, ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಎಂಜಿನಿಯರ್ ಸಿದ್ಧಾರ್ಥ ಹಾಗೂ ಗುತ್ತಿಗೆದಾರ ಚವ್ಹಾಣ್ ಹಾಗೂ ಬಿಜೆಪಿ ಮುಖಂಡರು ಮತ್ತು ಫಲಾನುಭವಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.