ADVERTISEMENT

‘ಗೃಹರಕ್ಷಕ ದಳಕ್ಕೂ ಮೂಲ ಸೌಕರ್ಯ ನೀಡಿ’

ಗೃಹ ರಕ್ಷಕ ದಳದ ತಾತ್ಕಾಲಿಕ ಕಚೇರಿ ಉದ್ಘಾಟಿಸಿದ ಶಾಸಕ ಹರೀಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:22 IST
Last Updated 8 ಜೂನ್ 2025, 16:22 IST
ಹರಿಹರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಗೃಹರಕ್ಷಕ ದಳದ ತಾತ್ಕಾಲಿಕ ಕಚೇರಿ ಕಟ್ಟಡವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು. ಜಿಲ್ಲಾ ಸಮಾದೇಷ್ಟ ಡಾ.ಸುಚೇತ್ ಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು
ಹರಿಹರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಗೃಹರಕ್ಷಕ ದಳದ ತಾತ್ಕಾಲಿಕ ಕಚೇರಿ ಕಟ್ಟಡವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು. ಜಿಲ್ಲಾ ಸಮಾದೇಷ್ಟ ಡಾ.ಸುಚೇತ್ ಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು   

ಪ್ರಜಾವಾಣಿ ವಾರ್ತೆ

ಹರಿಹರ: ‘ಪಟ್ಟಣದಲ್ಲಿ ಗೃಹರಕ್ಷಕ ದಳದ ಕಚೇರಿ ನಿರ್ಮಾಣಕ್ಕಾಗಿ ನಗರಸಭೆಯಿಂದ ನಿವೇಶನ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ’ ಶಾಸಕ ಬಿ.ಪಿ.ಹರೀಶ್ ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಗೃಹರಕ್ಷಕ ದಳದ ತಾತ್ಕಾಲಿಕ ಕಚೇರಿ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ‘ಕೆಲವು ದಿನಗಳ ಹಿಂದೆ ಶಿಥಿಲಗೊಂಡ ಗೃಹರಕ್ಷಕ ದಳದ ಕಚೇರಿಯನ್ನು ಪರಿಶೀಲಿಸಿದ್ದೆ, ಕಾನೂನು ಸುವ್ಯವಸ್ಥೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಜೀವದ ಹಂಗು ತೊರೆದು ಪೊಲೀಸರಂತೆ ಸೇವೆ ಸಲ್ಲಿಸುವ ಗೃಹರಕ್ಷಕ ದಳದವರಿಗೆ ಈ ತಾತ್ಕಾಲಿಕ ಕಟ್ಟಡ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.  

ADVERTISEMENT

‘ಈ ಕಟ್ಟಡದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯ ನಿರ್ಮಾಣವೂ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ತಾ.ಪಂ ಇ.ಒ ಅವರ ಜೊತೆಗೆ ಚರ್ಚಿಸುತ್ತೇನೆ’ ಎಂದರು.

‘ಗೃಹರಕ್ಷಕ ದಳದ ಸಿಬ್ಬಂದಿ ಸದ್ಯಕ್ಕೆ ಪೊಲೀಸ್, ಅಗ್ನಿಶಾಮಕ ದಳ, ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಮೆಚ್ಚುಗೆಯನ್ನು ಪಡೆದಿದ್ದಾರೆ. ತುರ್ತು ಸಂದರ್ಭಗಳಲ್ಲಿ ಪ್ರಾಣದ ಹಂಗು ತೊರೆದು ಇತರರ ಪ್ರಾಣ ರಕ್ಷಣೆ ಮಾಡುವ ಕಾರ್ಯದಲ್ಲಿ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ’ ಎಂದು ಜಿಲ್ಲಾ ಸಮಾದೇಷ್ಟ ಡಾ.ಸುಚೇತ್ ಕುಮಾರ್ ಹೇಳಿದರು.

‘ಕೇವಲ ಗೌರವಧನವನ್ನು ಪಡೆದು ಸಿಬ್ಬಂದಿ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಶಾಸಕರು ಸರ್ಕಾರದ ಗಮನ ಸೆಳೆಯಬೇಕು’ ಎಂದು ಗೃಹ ರಕ್ಷಕ ದಳದ ಅಧಿಕಾರಿ ನಾಗರಾಜ್ ಜಿಗಳಿ ಮನವಿ ಮಾಡಿದರು.

‘1972ರಿಂದಲೂ ನಗರದಲ್ಲಿ ಗೃಹ ರಕ್ಷಕ ದಳಕ್ಕೆ ನಿವೇಶನ ಮಂಜೂರು ಮಾಡಲು ಮನವಿಗಳನ್ನು ಸಲ್ಲಿಸುತ್ತಾ ಬರಲಾಗಿದೆ, ಆದರೆ ಕಾರಣಾಂತರದಿಂದ ಆ ಬೇಡಿಕೆ ಈಡೇರಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಶಾಶ್ವತ ಅಂಗವೆನಿಸಿಕೊಂಡಿರುವ ಗೃಹ ರಕ್ಷಕ ದಳಕ್ಕೆ ಶಾಸಕರೂ ಹಾಗೂ ನಗರಸಭೆಯವರು ಉತ್ತಮವಾದ ನಿವೇಶನವನ್ನು ಮಂಜೂರು ಮಾಡಬೇಕು’ ಎಂದು ಸಾರ್ಜೆಂಟ್ ಎಸ್.ಕೇಶವ ಕೋರಿದರು.

ದಾವಣಗೆರೆ ಜಿಲ್ಲಾ ಘಟಕದ ಅಧಿಕಾರಿ ಸರಸ್ವತಿ, ಧೂಡಾ ಮಾಜಿ ಸದಸ್ಯ ರಾಜೂ ರೋಖಡೆ, ತಾ.ಪಂ ಅಧಿಕಾರಿ ಕರಿಬಸಪ್ಪ, ಹರಿಹರ ಗೃಹರಕ್ಷಕ ದಳದ ಅಧಿಕಾರಿ ಕೆ.ಎಚ್.ಪ್ರಕಾಶ್ ಹಾಗೂ ಸಿಬ್ಬಂದಿ ಎಸ್.ನಾಗಪ್ಪ, ಬಿ.ಗಾಳೆ ಮಲ್ಲಿಕಾರ್ಜುನ, ಎಂ.ಎಸ್.ಪ್ರಕಾಶ್, ಎಂ.ಎಚ್.ಗಣೇಶ, ರೇಣುಕಾ, ಲೋಹಿತ್, ಮಂಜುಳಾ, ರಾಧಾ, ಸುಮಿತ್ರಮ್ಮ, ಮಧು, ಸುಭಾಷ್, ಶಿವಕುಮಾರ್, ವೈ.ಗುರುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.