ಹರಿಹರ: ಹಿಂದೂ ಧರ್ಮದ ಪ್ರಖರತೆ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಇಲ್ಲಿನರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶಾರದೇಶಾನಂದಜೀ ಸ್ವಾಮೀಜಿ ಹೇಳಿದರು.
ನಗರದ ಎಸ್ಜೆವಿಪಿ ಕಾಲೇಜಿನಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಬೆಂಗಳೂರಿನ ಇಂಡಿಯಾ ಸುಧಾರ್ ಸಂಸ್ಥೆ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಕುರಿತ ಕಿರು ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರು ಅಮೆರಿಕದ ಚಿಕಾಗೋದಲ್ಲಿ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣದ 129ನೇವರ್ಷಾಚರಣೆ ಅಂಗವಾಗಿ ಇಂಡಿಯಾ ಸುಧಾರ್ ಸಂಸ್ಥೆಯ ನಾಟಕ ಪ್ರದರ್ಶನ ಕಾರ್ಯ ಶ್ಲಾಘನೀಯ. ದೇಶ ಮತ್ತು ಧರ್ಮಕ್ಕಾಗಿ ದುಡಿದ ಮಹಾತ್ಮರ ಋಣವನ್ನು ನಾವು ತೀರಿಸಲು ಸಾಧ್ಯವಿಲ್ಲ. ಆದರೆ ಅವರ ಸ್ಮರಣೆಯನ್ನು ಮಾಡುವ ಮೂಲಕ ಗೌರವ ಸಲ್ಲಿಸಬೇಕು ಎಂದರು.
ಇಂಡಿಯಾ ಸುಧಾರ್ ಸಂಸ್ಥೆಯ 15 ಜನರ ತಂಡ ವಿವೇಕಾನಂದರ ಕುರಿತ ಕಿರು ನಾಟಕ ಪ್ರದರ್ಶಿಸಿತು.
ಎಸ್ಜೆವಿಪಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಶಿವಗಂಗಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಇಂಡಿಯಾ ಸುಧಾರ್ ಸಂಸ್ಥೆಯ ವಿನೋದ್ ಮುರಗೋಡು, ಮಧುಸೂಧನ್, ಸಂಸ್ಕೃತಿ, ಸ್ಫೂರ್ತಿ, ವೀಣಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶರಣಕುಮಾರ್ ಹೆಗಡೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಈಶಪ್ಪ ಬೂದಿಹಾಳ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.