ದಾವಣಗೆರೆ: ಲಾಕ್ಡೌನ್ ಎಷ್ಟು ಮಾಡೋದು. ನೀವು ಸೆಲ್ಫ್ ಲಾಕ್ಡೌನ್ ಮಾಡಿಕೊಳ್ಳಿ. ಹೊರಗೆ ಅನಗತ್ಯವಾಗಿ ಅಡ್ಡಾಡಬೇಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.
ಈ ಬಗ್ಗೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾರೆ. ನಿತ್ಯ ಕಾರಣ ಹುಡುಕಿಕೊಂಡು ಹೊರಗೆ ಬರುತ್ತಿದ್ದೀರಿ. ಒಂದಿನ ಕರಿಬೇವು, ಮತ್ತೊಂದು ದಿನ ಕೊತ್ತಂಬರಿ ಸೊಪ್ಪು, ಇನ್ನೊಂದು ದಿನ ಉಳ್ಳಾಗಡ್ಡಿ, ಸೌತೆಕಾಯಿ, ಸಕ್ಕರೆ, ಚಾಪುಡಿ ಹೀಗೆ ಖರೀದಿಗೆ ಬರುತ್ತಿದ್ದೀರಿ. ಅದನ್ನು ನಿಲ್ಲಿಸಿ. ಹಗುರವಾಗಿ ಪರಿಗಣಿಸಿದವರೆಲ್ಲ ಇಲ್ಲವಾಗಿದ್ದಾರೆ. ಅವರಿಗೆ ಸ್ಮಶಾನದಲ್ಲಿಯೂ ಜಾಗ ಸಿಗುತ್ತಿಲ್ಲ ಎಂದು ಎಚ್ಚರಿಸಿದ್ದಾರೆ.
194 ಗ್ರಾಮ ಪಂಚಾಯಿತಿಗಳಿಗೆ 194 ತಂಡಗಳನ್ನು ಮಾಡಿದ್ದೇವೆ. ಆ ತಂಡಗಳು ಬಂದಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಳೆದ ಬಾರಿಯ ಕೊರೊನಾ ಬೇರೆ ನಮೂನೆ ಇತ್ತು. ಇದು ಅದಕ್ಕಿಂತ ಅಪಾಯಕಾರಿಯಾಗಿ ಇದೆ ಎಂದು ತಿಳಿಸಿದ್ದಾರೆ.
ಎರಡನೇ ಅಲೆ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಶೇ 50ರಷ್ಟು ಕೊರೊನಾ ಗ್ರಾಮೀಣ ಭಾಗದಲ್ಲೇ ಕಂಡು ಬಂದಿದೆ. ಗುಂಪು ಗೂಡುವುದು, ಅಂತರ ಕಾಪಾಡಿಕೊಳ್ಳದೇ ಇರುವುದು ಒಂದು ಕಾರಣ. ಜತೆಗೆ ಅನಾರೋಗ್ಯ ಉಂಟಾದರೆ ಪರೀಕ್ಷೆ ಮಾಡಿಸಿಕೊಳ್ಳದೇ ಅಪಾಯ ಉಂಟಾಗುತ್ತಿದೆ. ಶೀತಜ್ವರ ಉಂಟಾದರೆ ಪ್ರತಿ ಸಲದಂತೆ ಶೀತಜ್ವರ ಎಂದು ತಿಳಿದುಕೊಳ್ಳಬೇಡಿ. ಕೋವಿಡ್ ಎಂದೇ ತಿಳಿದು ಪರೀಕ್ಷೆ ಮಾಡಿಸಿಕೊಳ್ಳಿ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಬಂದಾಗ ಸಹಕಾರ ನೀಡಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.