ಜಗಳೂರು: ಕಲಾವಿದರಿಗೆ ಸರ್ಕಾರ ನೀಡುವ ಮಾಸಾಶನ ಐದಾರು ತಿಂಗಳಿಂದ ಸ್ಥಗಿತವಾಗಿದ್ದು, ಕಲಾವಿದರು ಜೀವನ ನಿರ್ವಹಣೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಖಜಾನೆ ಇಲಾಖೆಯಿಂದ ನೇರವಾಗಿ ಕಲಾವಿದರಿಗೆ ಮಾಸಾಶನ ದೊರೆಯುತ್ತಿತ್ತು. ಆದರೆ ಈಚೆಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ವರ್ಗಾವಣೆಯಾದಾಗಿನಿಂದ ಸರಿಯಾಗಿ ಮಾಸಾಶನ ಬಿಡುಗಡೆಯಾಗುತ್ತಿಲ್ಲ ಎಂದು ಕಲಾವಿದರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ ಸಮರ್ಪಕವಾಗಿ ಮಾಸಾಶನ ಬಂದಿಲ್ಲ. ಇದರಿಂದಾಗಿ ವಯಸ್ಸಾಗಿರುವ ಹಿರಿಯರು ಹಾಗೂ ವೃದ್ಧ ಕಲಾವಿದರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಮಾಸಾಶನ ಬಿಡುಗಡೆ ವಿಳಂಬವಾದಲ್ಲಿ ಅಥವಾ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಜಿಲ್ಲಾ ಕೇಂದ್ರಕ್ಕೆ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಹೋಗಿ ಬರಬೇಕಾಗುತ್ತದೆ. ಬಡ ಕಲಾವಿದರ ಹಿತದೃಷ್ಟಿಯಿಂದ ಸಕಾಲದಲ್ಲಿ ಮಾಸಾಶನ ಬಿಡುಗಡೆ ಮಾಡಬೇಕು ಎಂದು ಮಾಸಾಶನ ಪಡೆಯುತ್ತಿರುವ ಕಲಾವಿದರಾದ ರಂಗ ನಿರ್ದೇಶಕ ಮೂಗಬಸಪ್ಪ, ಹರಿಕಥೆ ವಿದ್ವಾನ್ ಗಿಡ್ಡನಕಟ್ಟೆ ಬಸವರಾಜಪ್ಪ, ನಿಂಗಪ್ಪ ತೋರಣಗಟ್ಟೆ, ಸಿದ್ದಮ್ಮನಹಳ್ಳಿ ರಂಗಪ್ಪ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.