ADVERTISEMENT

ಪರಿಸರ ಸ್ನೇಹಿ ಹಬ್ಬ ಆಚರಿಸೋಣ

ನಾಗರಿಕ ಸೌಹಾರ್ದ ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:23 IST
Last Updated 23 ಆಗಸ್ಟ್ 2019, 9:23 IST
ದಾವಣಗೆರೆಯ ಎಸ್‌ಪಿ ಕಚೇರಿಯಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಎಸ್‌ಪಿ ಹನುಮಂತರಾಯ ಮತ್ತು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪರಸ್ಪರ ಚರ್ಚಿಸಿದರು
ದಾವಣಗೆರೆಯ ಎಸ್‌ಪಿ ಕಚೇರಿಯಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಎಸ್‌ಪಿ ಹನುಮಂತರಾಯ ಮತ್ತು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪರಸ್ಪರ ಚರ್ಚಿಸಿದರು   

ದಾವಣಗೆರೆ: ‘ಪರಿಸರಕ್ಕೆ ಮತ್ತು ಜನ ಜೀವನಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ಬಳಕೆ, ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಡಿಜೆಗಳ ಸದ್ದಿನಿಂದ ದೂರವಿದ್ದು, ಶಾಂತಿ ಸೌಹಾರ್ದ ಹಾಗೂ ಪರಿಸರ ಸ್ನೇಹಿ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗೋಣ’ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಸಲಹೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗೌರಿ-ಗಣೇಶ ಮತ್ತು ಮೊಹರಂ ಹಬ್ಬಗಳ ನಾಗರಿಕರ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಎರಡು ಹಬ್ಬಗಳು ಸಮಾಜದಲ್ಲಿ ಶಾಂತಿ ಸೌಹಾರ್ದ ಸಾರುವ ಹಬ್ಬಗಳಾಗಿವೆ. ಈ ಹಬ್ಬಗಳ ಯಶಸ್ವಿ ಆಚರಣೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯು ಬದ್ಧವಾಗಿದೆ. ನಾಗರಿಕರ ಸಹಕಾರ ಕೂಡ ಅಷ್ಟೇ ಮುಖ್ಯವಾಗಿದ್ದು ಎಲ್ಲರೂ ಒಗ್ಗೂಡಿ ಹಬ್ಬ ಆಚರಿಸೋಣ’ ಎಂದರು.

‘ಸ್ಥಳೀಯ ಕಲೆ, ಕಲಾವಿದರುಗಳನ್ನು ಪ್ರೋತ್ಸಾಹಿಸುವ ಮೂಲಕ ಹಬ್ಬಗಳ ಆಚರಿಸೋಣ. ಕಿವಿಗೆ ಮಾರಕವಾಗಿರುವ ಡಿಜೆ ಕೈಬಿಡಿ.
ನಮ್ಮ ಆಚರಣೆಗಳು ಆಡಂಬರಗಳಿಲ್ಲದೇ ಭಕ್ತಿಗೆ, ನಂಬಿಕೆಗೆ ಪೂರಕವಾಗಿರಲಿ’ ಎಂದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ‘ಕಾನೂನುಗಳು ಮನುಕುಲದ ಒಳಿತಿಗಾಗಿ ಇವೆ, ಅವುಗಳನ್ನು ನಾವುಗಳೇ ಪಾಲಿಸಬೇಕು. ಡಿಜೆಗಳಿಗೆ ಸಂಬಂಧಿಸಿದಂತೆ ಹಿಂದಿನ ವರ್ಷಗಳಲ್ಲಿ ಅನುಸರಿಸಿರುವ ಮಾನದಂಡಗಳನ್ನೇ ಅನುಸರಿಸಲಾಗುವುದು. ಇದರಲ್ಲಿ ಯಾವುದೇ ಸಡಿಲಿಕೆ ಇಲ್ಲ. ಗಣೇಶ ಮೂರ್ತಿ ವಿಸರ್ಜನ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಅಲ್ಲಿಯೇ ವಿಸರ್ಜನೆ ಕಾರ್ಯ ಮಾಡಬೇಕು. ಸಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹಬ್ಬಿಸುವ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜು, ‘ಹಬ್ಬದಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತರಕರ ಘಟನೆಗಳು ಸಂಭವಿಸದಂತೆ ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಅಧಿಕಾರಿ ಮತ್ತು ನಾಗರಿಕರ ನಡುವೆ ಸಮನ್ವಯ ಅತಿ ಮುಖ್ಯವಾಗಿದೆ. ನಾಗರಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕು’ ಎಂದು ಹೇಳಿದರು.

ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿ ಚನ್ನಬಸಪ್ಪ, ಮುಸ್ಲಿಂ ಸಮಾಜದ ಮುಖಂಡರಾದ ಯಾಸೀನ್ ರಜ್ವಿಖಾನ್, ಮುಖಂಡ ಅವರಗೆರೆ ಉಮೇಶ್, ಹಿಂದೂ ಜಾಗರಣ ವೇದಿಕೆಯ ಎಸ್.ಟಿ.ವೀರೇಶ್ ಮಾತನಾಡಿ, ಸರಳ ಹಬ್ಬ ಆಚರಿಸಲು ಸಹಕರಿಸಬೇಕು’ ಎಂದರು.

ಮಹಾನಗರ ಪಾಲಿಕೆಯ ಅಧಿಕಾರಿ ಚಂದ್ರಶೇಖರ್ , ಬೆಸ್ಕಾಂ ಇಲಾಖೆಯ ಅಧಿಕಾರಿ ಮಾಲತೇಶ್ ಮಾತನಾಡಿದರು.

ವಿವಿಧ ಸಮಾಜದ ಮುಖಂಡರಾದ ನ್ಯಾಮತಿಯ ಓಮೇಶ್ವರಪ್ಪ, ಚನ್ನಗಿರಿಯ ಜಬೀವುಲ್ಲಾ, ಇಮಾಮ್ ಹುಸೇನ್ ಬಿಳಿಚೋಡು, ಅವರಗೆರೆ ಚಂದ್ರು, ಸೋಮಲಪುರ ಹನುಮಂತಪ್ಪ, ಪಾಲಿಕೆಯ ಮಾಜಿ ಸದಸ್ಯ ನಾಗರಾಜ್, ಸತೀಶ್ ಪೂಜಾರಿ, ಹೇಮಣ್ಣ, ಫಣಿಯಪುರದ ಲಿಂಗರಾಜು ಮತ್ತು ಅಗ್ನಿಶಾಮಕ ದಳದ ಸುರೇಶ್‍ಕುಮಾರ್ ಮಾತನಾಡಿದರು.

ವಿವಿಧ ಸಂಘ ಸಂಶ್ಥೆಗಳ ಮುಖಂಡರು, ಪ್ರತಿನಿದಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಡಿವೈಎಸ್‍ಪಿ ಗಂಗಲ್ ಸಿಪಿಐ ಉಮೇಶ್, ದೇವರಾಜ್ ಬಿ. ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.