ಮಾದನಬಾವಿ (ನ್ಯಾಮತಿ): ಗ್ರಾಮಗಳಲ್ಲಿರುವ ಬಾವಿಗಳು ಮುಚ್ಚಿಹೋಗಿವೆ. ಒತ್ತುವರಿಯಿಂದಾಗಿ ಕೆರೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಇದಕ್ಕೆ ಅಪವಾದ ಎಂಬಂತೆ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಪಕ್ಕದಲ್ಲಿಇರುವ ಪುರಾತನ ಕಲ್ಯಾಣಿಗೆ ಯುವಕರು ಕಾಯಕಲ್ಪ ನೀಡಲು ಮುಂದಾಗಿದ್ದಾರೆ.
ಈ ಕಲ್ಯಾಣಿಯನ್ನು ಚಾಲುಕ್ಯರು ನಿರ್ಮಾಣ ಮಾಡಿರಬಹುದು ಎನ್ನಲಾಗಿದ್ದು, ಈ ಹಿಂದೆ ಇದರಲ್ಲಿ ನೀರು ಸಂಗ್ರಹ ಮಾಡಿ ದೇವಸ್ಥಾನ ಪೂಜೆಗೆ ಹಾಗೂ ಗ್ರಾಮದ ಕುಡಿಯುವ ನೀರಿಗೆ ಬಳಸಿಕೊಂಡಿರುವ ಸಾಧ್ಯತೆ ಇದೆ. ಸುಮಾರು ಐದು ದಶಕಗಳಿಂದ ಕಲ್ಯಾಣಿಯ ಬಳಕೆ ಮಾಡದಿದ್ದರಿಂದ ಕಲ್ಲು ಮಣ್ಣಿನಿಂದ ಮುಚ್ಚಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಾರಂಭಿಸಿತ್ತು.
ಈಚೆಗೆ ಗ್ರಾಮ ಪಂಚಾಯಿತಿ ನೂತನ ಸದಸ್ಯರಾಗಿ ಆಯ್ಕೆಯಾದ ಯುವಕರು, ಗವಿಸಿದ್ದೇಶ್ವರ ಟ್ರಸ್ಟ್ ಮತ್ತು ಗ್ರಾಮಸ್ಥರ ಸಹಕಾರದಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಕಲ್ಯಾಣಿಯ ಪುನಶ್ಚೇನಕ್ಕೆ ಮುಂದಾಗಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಗೆ ನೋಂದಾಯಿಸಿಕೊಂಡ ಕೂಲಿ ಕಾರ್ಮಿಕರು ಅಲ್ಲದೇ ಗ್ರಾಮದ ಯುವಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಎಸ್. ರುದ್ರಪ್ಪ, ಟಿ. ಕುಮಾರ, ಕೆ.ಎಸ್. ಕೆಂಚಪ್ಪ, ರೇಣುಕಪ್ಪ.
ದೇವಸ್ಥಾನದ ಆವರಣ ವಿಶಾಲವಾಗಿದ್ದು, ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಕಲ್ಯಾಣಿ ಪುನಶ್ಚೇತನದಿಂದ ಮಳೆ ನೀರು ಸಂಗ್ರಹವಾಗಿ ಗ್ರಾಮದಲ್ಲಿ ಅಂರ್ತಜಲ ಹೆಚ್ಚುತ್ತದೆ. ಅಲ್ಲದೇ ಕಲ್ಯಾಣಿಯ ಸುತ್ತಲೂ ಮರ, ಗಿಡಗಳನ್ನು ಬೆಳೆಸಿ, ತಂತಿ ಬೇಲಿಯಿಂದ ರಕ್ಷಣೆ ಕೊಡುವ ಉದ್ದೇಶ ಇದೆ ಎಂದು ಮುಖಂಡರಾದ ಎನ್.ಎಸ್. ನಾಗರಾಜ, ಎಂ.ಡಿ. ಬಸವರಾಜಪ್ಪ, ಬಿ. ಕರಿಬಸಪ್ಪ, ದಿಳ್ಳಿ ಭರ್ಮಪ್ಪ, ನಾಗಪ್ಪ ಕರಡಿ, ಎನ್.ಸಿ. ದೇವರಾಜ ಅವರು ‘ಪ್ರಜಾವಾಣಿ’ಗೆ
ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.