ದಾವಣಗೆರೆ: ಫೋನ್ ಇನ್ ಕಾರ್ಯ ಕ್ರಮದಲ್ಲಿ ‘ಮಾತೃಶ್ರೀ’, ‘ಮಾತೃ ವಂದನಾ’ ಯೋಜನೆಗಳ ಬಗ್ಗೆಯೇ ಹೆಚ್ಚು ಪ್ರಶ್ನೆಗಳು ಕೇಳಿಬಂದವು. ಎಲ್ಲಕ್ಕೂ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳ ಬಗೆಗೆ ಜನರಲ್ಲಿದ್ದ ಗೊಂದಲ ಪರಿಹರಿಸುವ ಪ್ರಯತ್ನ ಮಾಡಿದರು.
* ಮಾತೃ ವಂದನಾ ಯೋಜನೆಗೆ ಅರ್ಜಿ ಹಾಕುವುದು ಹೇಗೆ? ಫಲಾನುಭವಿಗೆ ಅರ್ಹತೆ ಏನು?
-ವಸಂತ್, ಗೋವೇರಹಳ್ಳಿ; ಪ್ರಸನ್ನಕುಮಾರ್ ಹರಪನಹಳ್ಳಿ ತಾಲ್ಲೂಕು
ಯೋಜನೆಗೆ ಅಂಗನವಾಡಿ ಸಹಾ ಯಕಿಯ ಸಹಿಯೊಂದಿಗೆ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ನೀಡಿದರೆ ಸಾಕು. ಗರ್ಭಿಣಿಯಾದ 150 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
* ಭಾಗ್ಯಲಕ್ಷ್ಮಿ ಬಾಂಡ್ನಲ್ಲಿ ಮಗಳ ಹೆಸರು ಬದಲಾಗಿದೆ. ಸರಿಪಡಿಸುವುದು ಹೇಗೆ?
-ಚನ್ನೇಶ್ ಸಿ.ಎಂ. ಚಿಕ್ಕಳ್ಳಿ, ಹೊನ್ನಾಳಿ
ಹೆಸರು ಬದಲಾಗಿರುವುದನ್ನು ಸರಿಪಡಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಅರ್ಜಿ ಸಲ್ಲಿಸಿ. ಅವರು ಸರಿಪಡಿಸುತ್ತಾರೆ.
* ನಿಟುವಳ್ಳಿಯ ಅಂಗನವಾಡಿ ಕಟ್ಟಡ ಚಿಕ್ಕದಿದ್ದು, ಮಕ್ಕಳು ಆಟವಾಡುವಲ್ಲಿಯೇ ಅಡುಗೆ ಮಾಡುವ ಪರಿಸ್ಥಿತಿ ಇದೆ. ಫ್ಲೋರೈಡ್ಯುಕ್ತ ನೀರೇ ಗತಿ. ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.
-ಹಾಲೇಶ ನಾಯ್ಕ್, ಬಸವಾಪಟ್ಟಣ
ಅಂಗನವಾಡಿ ಕಟ್ಟಡ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
* ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಸಿ 8 ತಿಂಗಳಾಯಿತು; ಇನ್ನೂ ಹಣ ಬಂದಿಲ್ಲ. ಮಾತೃಶ್ರೀ ಯೋಜನೆಗೆ ಅರ್ಜಿ ಹಾಕಿದ್ದೆ. ಹಣ ಬಂದಿಲ್ಲ?
-ನಯನಾ, ಸುಮಾ, ದೀಪಶ್ರೀ ದಾವಣಗೆರೆ; ನಾಗಮಣಿ ಕಾರಿಗನೂರು; ಕುಬೇರಪ್ಪ ವಿಭೂತಿ, ಹರಿಹರ
ನಿಮ್ಮ ಅಂಗನವಾಡಿ ಯಾವ ವ್ಯಾಪ್ತಿಗೆ ಬರುತ್ತದೆ ಎಂದು ಮಾಹಿತಿ ನೀಡಿ. ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳು ತ್ತೇನೆ. ಇಲಾಖೆಯ ಸಿಬ್ಬಂದಿ ನಿಮಗೆ ಕರೆ ಮಾಡಿ ಏನು ಸಮಸ್ಯೆಯಾಗಿದೆ, ಏಕೆ ಹಣ ಬಂದಿಲ್ಲ ಎಂಬ ಬಗ್ಗೆ ತಿಳಿಸುತ್ತಾರೆ.
* 3ನೇ ಮಗುವಿಗೂ ಮಾತೃಶ್ರೀ ಯೋಜನೆ ಅನ್ವಯವಾಗುವುದೇ?
-ವಿದ್ಯಾ, ಕೆಟಿಜೆ ನಗರ, ದಾವಣಗೆರೆ
ಇಲ್ಲ. ‘ಮಾತೃವಂದನಾ’ 1 ಮಗುವಿಗೆ, ‘ಮಾತೃಶ್ರೀ’ ಯೋಜನೆ ಎರಡನೇ ಮಗುವಿಗೂ ಅನ್ವಯವಾಗುತ್ತದೆ.
* ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಎಸ್ಸಿ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಏನು ಮಾಡುವುದು?
-ಪುಷ್ಪಾವತಿ, ಕಬ್ಬೂರು, ದಾವಣಗೆರೆ ತಾಲ್ಲೂಕು
ಭಾಗ್ಯಲಕ್ಷ್ಮಿ ಯೋಜನೆಗೆ ಎಸ್ಸಿ ಜಾತಿ ಪ್ರಮಾಣ ಪತ್ರ ಇಲ್ಲದಿದ್ದರೂ ಸಾಮಾನ್ಯ ವರ್ಗದಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.
* ಹೊನ್ನಾಳಿ ತಾಲ್ಲೂಕಿನ ಹನುಮಸಾಗರ ತಾಂಡಾದ ಅಂಗನವಾಡಿಯಲ್ಲಿ ಗುಣಮಟ್ಟದ ಆಹಾರ ಕೊಡುತ್ತಿಲ್ಲ.
-ರಮೇಶ್ ನಾಯ್ಕ್, ಹನುಮಸಾಗರ ತಾಂಡಾ, ಹೊನ್ನಾಳಿ
ಈ ಬಗ್ಗೆ ತಾಂಡಾಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು.
* ನಾನು ಹಿರಿಯ ನಾಗರಿಕ. ಆರೋಗ್ಯ ಕಾರ್ಡ್ ನೀಡಿಲ್ಲ. ಪರಿಹಾರ ಏನು
-ವಿಜಯಕುಮಾರ್, ದಾವಣಗೆರೆ
ಈ ಬಗ್ಗೆ ಡಿಎಚ್ಒ ಅವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ.
* ಅಂಗನವಾಡಿಗೆ ಪೂರೈಕೆಯಾಗುವ ಧಾನ್ಯದಲ್ಲಿ ಹುಳ ಇರುತ್ತದೆ.
-ಮಂಜಪ್ಪ, ಹುರಳೇಹಳ್ಳಿ, ಹೊನ್ನಾಳಿ
ಪ್ರತಿ ತಿಂಗಳು ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ನಾನೇ ಆಹಾರ ಪರಿಶೀಲಿ ಸಿದ್ದೇನೆ. ಅಂಗನವಾಡಿಯಲ್ಲಿ ಖರ್ಚಾ ಗದೆ ಉಳಿದಿರುವ ಹಳೆಯ ಧಾನ್ಯಗಳನ್ನು ಉಳಿಸಿಕೊಂಡು ಹೊಸ ಧಾನ್ಯಗಳನ್ನು ಅಡುಗೆಗೆ ಬಳಸುವ ಕಾರಣ ಹಳೆ ಧಾನ್ಯಗಳಲ್ಲಿ ಹುಳ ಕಾಣಿಸಿಕೊಳ್ಳುತ್ತದೆ. ಈ ಬಗ್ಗೆ ಅಂಗನವಾಡಿ ಸಹಾಯಕಿ ಯರಿಗೆ ನಿರ್ದೇಶನ ನೀಡಲಾಗುವುದು. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾ ಗುವುದು.
* ಒಂದು ತಿಂಗಳಿನಿಂದ ಅಂಗನವಾಡಿ ನೌಕರರಿಗೆ ಬಾಕಿ ವೇತನ ಬಂದಿಲ್ಲ.
-ಅಂಜಿನಪ್ಪ, ಜಗಳೂರು
ಬಾಕಿ ವೇತನಕ್ಕಾಗಿ ವಿಶೇಷ ಅನುದಾನ ಬಿಡುಗಡೆಯಾಗಲಿದೆ. ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.