ADVERTISEMENT

22 ಕೆರೆ ತುಂಬಿಸುವ ಯೋಜನೆ ಮೋಟರ್‌ ಚಾಲು ಮಾಡಿ: ಹೋರಾಟ ಸಮಿತಿ ಆಕ್ರೋಶ

30 ದಿನಗಳಿಂದ ನದಿಯಲ್ಲಿ ನೀರು ಹರಿಯುತ್ತಿದ್ದರೂ ಕೆರೆಗಳಿಗೆ ಹರಿಯದ ನೀರು: ಹೋರಾಟ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:23 IST
Last Updated 29 ಜುಲೈ 2021, 5:23 IST
22 ಕೆರೆಗಳ ಏತ ನೀರಾವರಿ ಯೋಜನೆಯ ಮೋಟಾರುಗಳನ್ನು ಚಾಲನೆ ಮಾಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ 22 ಕೆರೆಗಳ ಏತ ನೀರಾವರಿ ಯೋಜನೆಯ ಹೋರಾಟ ಸಮಿತಿ ಸದಸ್ಯರು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.
22 ಕೆರೆಗಳ ಏತ ನೀರಾವರಿ ಯೋಜನೆಯ ಮೋಟಾರುಗಳನ್ನು ಚಾಲನೆ ಮಾಡಬೇಕು. ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ 22 ಕೆರೆಗಳ ಏತ ನೀರಾವರಿ ಯೋಜನೆಯ ಹೋರಾಟ ಸಮಿತಿ ಸದಸ್ಯರು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.   

ದಾವಣಗೆರೆ: ಮಳೆ ಚೆನ್ನಾಗಿ ಬಂದಿರುವುದರಿಂದ ತುಂಗಭದ್ರಾ ನದಿಯಲ್ಲಿ ಒಂದು ತಿಂಗಳಿನಿಂದ ನೀರು ಹರಿಯುತ್ತಿದೆ. ಆದರೆ 22 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯ ಮೋಟರ್‌ಗಳು ಚಾಲನೆಗೊಂಡಿಲ್ಲ. ಯಾವುದೇ ಕೆರೆಗೆ ಅರ್ಧ ಅಡಿ ನೀರು ಕೂಡ ಹರಿದಿಲ್ಲ ಎಂದು 22 ಕೆರೆಗಳ ಏತ ನೀರಾವರಿ ಯೋಜನೆಯ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ನೀರು ಹರಿಸಲು ಮೋಟರ್‌ ಪಂಪು ಚಾಲು ಮಾಡಬೇಕು ಎಂದು ಸಮಿತಿಯವರು ಭಾನುವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

‘22 ಕೆರೆಗಳ ಏತ ನೀರಾವರಿ ಯೋಜನೆಯು ಪ್ರತಿ ವರ್ಷ 6 ತಿಂಗಳು ನಡೆಯಬೇಕಾಗಿರುತ್ತದೆ. ಆದರೆ 2020-21ನೇ ಸಾಲಿನಲ್ಲಿ ನೀರು ಹರಿದಿಲ್ಲ. ಈ ಬಗ್ಗೆ ಎಂಜಿನಯರ್‌ರನ್ನು ಕೇಳಿದರೆ ಪೈಪ್‌ ಒಡೆದಿದೆ. ರಿಪೇರಿ ಕೆಲಸ ನಡೆಯುತ್ತಿದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಎಲ್ ಆ್ಯಂಡ್ ಟಿ ಕಂಪನಿ ಮಾಡಿ ಕಳಪೆ ಕಾಮಗಾರಿ ನೀರು ಹರಿಯದಿರಲು ಒಂದು ಕಾರಣವಾದರೆ, ಭರಮಸಾಗರ ಕೆರೆಗಳಿಗೆ ನೀರು ಹರಿಸುವ ಹೊಸ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಇತ್ತ ಗಮನ ಹರಿಸದಿರುವುದು ಎರಡನೇ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಳಪೆ ಕೆಲಸದಿಂದ ಕೂಡ ಪೈಪ್‌ಲೈನ್ ಹಾಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.‌

ಈಗಿರುವ ಪೈಪ್‌ಲೈನ್ ಬದಲಿಸಿ ಹೊಸ ಪೈಪ್‌ಲೈನ್ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು. ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತದ ಮೂಲಕ ಸರ್ಕಾರ ಹಾಗೂ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಮನವಿ ಮಾಡಿಕೊಂಡರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಎಲ್. ಕೊಟ್ರೇಶ್ ನಾಯ್ಕ ಹುಲಿಕಟ್ಟೆ, ನೇರ್ಲಿಗಿ ಸ್ವಾಮಿ, ತುಪ್ಪದಹಳ್ಳಿ ಶಿವಕುಮಾರ್, ಹೇಮಂತ್ ರಾಜ್ ಆಲೂರು, ತುಂಬಿಗೆರೆ ಸಿದ್ದೇಶ್, ಆನಗೋಡು ಮಲ್ಲಿಕಾರ್ಜುನ್, ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ಬಲ್ಲೂರ್ ರವಿಕುಮಾರ್, ಆಲೂರು ಶಿವಣ್ಣ, ಎಸ್.ಕೆ. ಚಂದ್ರಪ್ಪ, ಮಲ್ಲಿಕಾರ್ಜುನ, ದಾನಪ್ಪ, ಹೊನ್ನಪ್ಪ, ಪ್ರಕಾಶ್ ಪಾಟೀಲ್, ಬಸವಂತಪ್ಪ,ಎಪಿಎಂಸಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಶೇಖರ,ಶಿವಣ್ಣ ಆಲೂರು, ತುಂಬಿಗೆರೆ ಸ್ವಾಮಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.