ಹೊನ್ನಾಳಿ: ಪ್ರಿಯಕರನೊಂದಿಗೆ ಸೇರಿ ತಂದೆಯನ್ನೇ ಕೊಲೆಗೈದ ತಾಯಿ, ಮಗಳು ಹಾಗೂ ಪ್ರಿಯಕರನನ್ನು ಹೊನ್ನಾಳಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕುಳಗಟ್ಟೆ ಗ್ರಾಮದ ಮಂಜಪ್ಪ (70) ಕೊಲೆಗೀಡಾದವರು.ತಾಲ್ಲೂಕಿನ ಕುಳಗಟ್ಟೆ ಗ್ರಾಮದ ವೈ.ಟಿ. ಶ್ರೀನಿವಾಸ್, ಸಿ. ಉಷಾ, ಕೆ.ಎಸ್. ಸಿಂಧು ಬಂಧಿತ ಆರೋಪಿಗಳು ಎಂದು ಸಿಪಿಐ ದೇವರಾಜ್ ತಿಳಿಸಿದ್ದಾರೆ.
‘ಕೊಲೆಗೀಡಾದ ಮಂಜಪ್ಪ ಅವರ ಪುತ್ರಿ ಉಷಾ ಕುಳಗಟ್ಟೆ ಗ್ರಾಮದ ಶ್ರೀನಿವಾಸ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದೇ ಸಲುಗೆಯ ಮೇಲೆ ಉಷಾ ಪುತ್ರಿ ಸಿಂಧು ಜತೆಗೂ ಶ್ರೀನಿವಾಸ್ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ಮಂಜಪ್ಪ ಅವರಿಗೆ ಗೊತ್ತಾಗಿತ್ತು. ಇದನ್ನು ಖಂಡಿಸಿದ ಅವರು ಮಗಳು ಹಾಗೂ ಮೊಮ್ಮಗಳಿಗೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ತಾಯಿ, ಮಗಳುಮಂಜಪ್ಪ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದರು’ ಎಂದು ಸಿಪಿಐಮಾಹಿತಿ ನೀಡಿದರು.
‘ಕೊಲೆಗೆ ಪೂರ್ವನಿಯೋಜಿತ ಸಂಚು ರೂಪಿಸಿ ಮಾರ್ಚ್ 1ರಂದು ಮಂಜಪ್ಪನಿಗೆ ಮದ್ಯ ಕುಡಿಸಿದ ಶ್ರೀನಿವಾಸ್ ಅಡಿಕೆ ತೋಟಕ್ಕೆ ನೀರು ಹರಿಸಲು ಕರೆದೊಯ್ದು ಮಾರಕಾಸ್ತ್ರಗಳಿಂದ ಹೊಡೆದು ಸಾಯಿಸಿದ್ದ. ಬಳಿಕ ಸಮೀಪದ ನಾಲೆಗೆ ಶವ ಎಸೆದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾನೆ. ನಾಲೆಯಲ್ಲಿ ತೇಲಿ ಹೋದ ಶವ ಕಮ್ಮಾರಗಟ್ಟೆ ಗ್ರಾಮದ ಬಳಿ ದೊರೆತಿತ್ತು’ ಎಂದು ವಿವರಿಸಿದರು.
ಆರೋಪಿಗಳು ಕೊಲೆ ಮಾಡಿರುವುದನ್ನು ತಪ್ಪೊಪ್ಪಿಕೊಂಡಿದ್ದು,ಮೂವರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.