ಹರಿಹರ: ನಗರದ ಹರಪನಹಳ್ಳಿ ರಸ್ತೆಯ ಹಳೆ ಕೋರ್ಟ್ ಸ್ಥಳದಲ್ಲಿ ಉದ್ದೇಶಿತ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹ 3 ಕೋಟಿ ಮಂಜೂರಾಗಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ಅಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಉದ್ದೇಶಿತ ಅಂಬೇಡ್ಕರ್ ಭವನ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರ
ರೊಂದಿಗೆ ಮಾತನಾಡಿ, ‘ಅನುದಾನ ಮಂಜೂರಾಗಿದ್ದು, ಭವನಕ್ಕಾಗಿ ಮೀಸಲಿರಿಸಲಾಗಿದೆ. ಸ್ಥಳ ನಿಗದಿಯಾಗದಿದ್ದರಿಂದ ಅನುದಾನ ಬಳಕೆ ಮಾಡಿರಲಿಲ್ಲ. ದಲಿತ ಸಮುದಾಯದವರು ನಗರದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಮನವಿ ನೀಡುತ್ತಾ ಬಂದಿದ್ದಾರೆ. ನಗರಸಭೆ ಸಾಮಾನ್ಯ ಸಭೆಯಲ್ಲೂ ಭವನ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಬೇಕೆಂದು ನಿರ್ಣಯ ಕೈಗೊಂಡಿದ್ದರಿಂದ ಸ್ಥಳ ಪರೀಶೀಲನೆ ಮಾಡಲಾಗಿದೆ ಎಂದು ಹೇಳಿದರು.
ನಿಗದಿತ ಸ್ಥಳದಲ್ಲಿ 80x100 ಅಡಿ ಅಳತೆಯಲ್ಲಿ ಸುಂದರ ಮತ್ತು ಸುಸಜ್ಜಿತ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ತೆರವುಗೊಳಿಸಿದ ನಂತರ ಗೃಹ ರಕ್ಷಕ ದಳದವರಿಗೆ ಕಚೇರಿ ನಿರ್ಮಾಣಕ್ಕೆ 25x70 ಮತ್ತು ಕಾಂಗ್ರೆಸ್ ಕಚೇರಿಗೆ 40x70 ಅಳತೆ ಜಾಗ ಮಂಜೂರು ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಗರಸಭಾ ಸದಸ್ಯರಾದ ಆಟೊ ಹನುಮಂತಪ್ಪ, ರಜನಿಕಾಂತ್, ಸುರೇಶ್ ತೆರದಹಳ್ಳಿ, ಮಾಜಿ ಸದಸ್ಯ ಬಿ.ಎನ್. ರಮೇಶ್, ಮುಖಂಡರಾದ ಎಲ್. ನಿರಂಜನ ಮೂರ್ತಿ, ನ್ಯಾಯವಾದಿ ಸುಭಾಶ್ ಚಂದ್ರ ಭೋಸ್, ಎಂ.ಎಸ್. ಆನಂದ್ ಕುಮಾರ್, ಸಂತೋಷ್ ನೋಟದವರ್, ಎ. ಹನುಮಂತಪ್ಪ, ಮಂಜುನಾಥ, ಜಿ. ಶಂಕರಮೂರ್ತಿ, ವೈ.ನಾಗರಾಜ್, ಪಿ.ಎನ್. ವೆಂಕಟೇಶ್, ವಿಜಯಕುಮಾರ್, ಎಚ್. ಕರಿಲಿಂಗಪ್ಪ, ಪೈ. ಹನುಮಂತಪ್ಪ, ಎಚ್. ಶಿವಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.