ದಾವಣಗೆರೆ: ಹುಟ್ಟಿದಲ್ಲಿಂದ ಹಿಡಿದು 2 ವರ್ಷ ತುಂಬುವವರೆಗೆ ಮಕ್ಕಳಿಗೆ ವಿವಿಧ ಲಸಿಕೆಗಳನ್ನು ನೀಡಲಾಗುತ್ತದೆ. ಬಳಿಕ 5, 10 ಮತ್ತು 15 ವರ್ಷಕ್ಕೆ ಲಸಿಕೆಗಳಿವೆ. ಆದರೆ ಇಲ್ಲಿರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಈವರೆಗೆ ಯಾವುದೇ ಲಸಿಕೆ ಹಾಕಿರಲಿಲ್ಲ. ಕೊರೊನಾ ನಿರೋಧಕ ಲಸಿಕೆ ನಮಗೂ ಹಾಕಿ ಎಂದು ಅಲೆಮಾರಿ ಸಮುದಾಯದ ಮುಖಂಡರು ಕೇಳಲು ಹೋಗಿದ್ದರಿಂದ ಮಕ್ಕಳಿಗೆ ಕೊಡಬೇಕಾದ ಲಸಿಕೆಗಳು ಸಿಗುವಂತಾಗಿದೆ.
ಸವಣೂರು ಪ್ಲಾಜಾದ ಹಿಂಭಾಗದಲ್ಲಿ ಪಿ.ಬಿ. ರಸ್ತೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಅಲೆಮಾರಿ ಸಮುದಾಯದ 35 ಕುಟುಂಬಗಳು ಟೆಂಟ್ ಹಾಕಿಕೊಂಡು ಸರ, ಬಳೆ, ಸೋಪು ಮುಂತಾದವುಗಳನ್ನು ಮಾರಿಕೊಂಡು ಬದುಕುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಇವರಿಗೆ ಆಹಾರ ಕಿಟ್ಗಳನ್ನು ಕೂಡ ಜಿಲ್ಲಾಡಳಿತ ನೀಡಿತ್ತು. ‘ಸುಡುಗಾಡು ಸಿದ್ಧ ಸಮುದಾಯದ ನಮಗೂ ಕೊರೊನಾ ನಿರೋಧಕ ಲಸಿಕೆ ನೀಡಿ’ ಎಂದು ಈ ಸಮುದಾಯದ ಮುಖ್ಯಸ್ಥರಾದ ನಾಗಾರ್ಜುನ ಅವರು ಜುಲೈ 30ರಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿದ್ದರು. ಲಸಿಕೆ ಹಾಕಿಸುವ ಭರವಸೆ ನೀಡಿದ ಜಿಲ್ಲಾಧಿಕಾರಿ ಕೂಡಲೇ ವ್ಯವಸ್ಥೆ ಮಾಡುವಂತೆ ಲಸಿಕೆ ಉಸ್ತುವಾರಿ ಹೊತ್ತಿರುವ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಕೆ.ಎಸ್. ಮೀನಾಕ್ಷಿ ಅವರಿಗೆ ಸೂಚಿಸಿದರು.
ಕೊರೊನಾ ನಿರೋಧಕ ಲಸಿಕೆ ಹಾಕಿಸಲು ಅಲ್ಲಿಗೆ ಹೋದರೆ ಸುಮಾರು 50 ಮಕ್ಕಳು ಅಲ್ಲಿದ್ದರು. ಯಾವ ಮಗುವಿಗೂ ಯಾವುದೇ ಲಸಿಕೆ ಹಾಕದೇ ಇರುವುದು ಕಂಡು ಬಂತು. ಎಸ್ಎಂಕೆ ನಗರದಲ್ಲಿರುವ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಶುಶ್ರೂಷಕರು, ಆಶಾ ಕಾರ್ಯಕರ್ತೆಯರನ್ನು ಕರೆಸಿ ಅಲ್ಲಿಯೇ ವಿವಿಧ ವಯೋಮಾನಕ್ಕೆ ತಕ್ಕಂತೆ ಲಸಿಕೆಗಳನ್ನು ನೀಡಲಾಯಿತು.
‘ಮಗು ಹುಟ್ಟಿದ ಒಂದೂವರೆ ತಿಂಗಳಿಗೆ ಹೆಪ್ ಬಿ, ಎರಡೂವರೆ ತಿಂಗಳಿಗೆ ಒಪಿವಿ, ಮೂರೂವರೆ ತಿಂಗಳಿಗೆ ಬಿಸಿಜಿ ನೀಡಲಾಗುತ್ತದೆ. ಪೆಂಟಾವೆಲೆಂಟ್ ಮೂರು ಬಾರಿ ಕೊಡಲಾಗುತ್ತದೆ. ಇದಲ್ಲದೇ 9 ತಿಂಗಳಿಗೆ ವಿಟಮಿನ್, ಎಂಆರ್1, ಪಿಸಿವಿ ಬೂಸ್ಟರ್, ಜೆಇ1, 16ರಿಂದ 24 ತಿಂಗಳಿಗೆ ಒಪಿವಿ ಬೂಸ್ಟರ್, ವಿಟಮಿನ್2, ಡಿಪಿಟಿ ಬೂಸ್ಟರ್, ಜೆಇ–2 ಕೊಡುತ್ತೇವೆ. 5 ವರ್ಷದಿಂದ 6 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಬೂಸ್ಟರ್–2, 10 ವರ್ಷ ಮತ್ತು 15 ವರ್ಷಕ್ಕೆ ಟಿಡಿ ನೀಡಲಾಗುತ್ತದೆ. ಇಲ್ಲಿ ಯಾವ ಮಕ್ಕಳಿಗೂ ಈ ಲಸಿಕೆಗಳನ್ನು ಕೊಡಿಸಿರಲಿಲ್ಲ. ನಾನು ಕೂಡಲೇ ಎಲ್ಲ ಮಕ್ಕಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿದೆ. ಶನಿವಾರ ಮತ್ತು ಸೋಮವಾರ 35 ಮಕ್ಕಳಿಗೆ ವಿವಿಧ ಲಸಿಕೆ ನೀಡಲಾಗಿದೆ. ಉಳಿದ 15 ಮಕ್ಕಳಿಗೆ ಇನ್ನೆರಡು ದಿನಗಳಲ್ಲಿ ಕೊಡಲಾಗುವುದು’ ಎಂದು ಡಾ. ಮೀನಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೊಡ್ಡವರಿಗೆ ಕೊರೊನಾ ಲಸಿಕೆ ಬೇಕು ಎಂದಾಗ ಎಲ್ಲಿ ವ್ಯವಸ್ಥೆ ಮಾಡುವುದು ಎಂದು ಕೇಳಿದ್ದೆ. ಅದಕ್ಕೆ ಅವರು ತಮ್ಮ ಎರಡು ಟೆಂಟ್ಗಳನ್ನು ಬಿಟ್ಟುಕೊಟ್ಟರು. ಸ್ವಲ್ಪ ಜ್ವರ ಇದ್ದ ಮೂರು ಮಂದಿಯನ್ನು ಬಿಟ್ಟು ಉಳಿದ ಎಲ್ಲರಿಗೂ ಲಸಿಕೆ ಹಾಕಲಾಗಿದೆ’ ಎಂದು ವಿವರಿಸಿದರು.
ಅಲೆಮಾರಿ ಸಮುದಾಯ ಆಗಿರುವುದರಿಂದ ಲಸಿಕೆಗಳು ಅವರಿಗೆ ತಲುಪಿಲ್ಲ. ಅದಕ್ಕಾಗಿ ಅವರಿಗೆ ಮೈಗ್ರೆಂಟ್ ಇಮ್ಯುನೈಜೇಶನ್ ಕಾರ್ಡ್ ನೀಡಿದ್ದೇವೆ. ಮುಂದೆ ಅವರು ಎಲ್ಲೇ ಹೋದರೂ ಈ ಕಾರ್ಡ್ ತೋರಿಸಿದರೆ ಆ ಮಕ್ಕಳಿಗೆ ಯಾವ ಲಸಿಕೆ ನೀಡಲಾಗಿದೆ. ಯಾವ ಲಸಿಕೆ ನೀಡಬೇಕಿದೆ ಎಂಬುದು ಗೊತ್ತಾಗುತ್ತದೆ’ ಎಂದು ಮಾಹಿತಿ ನೀಡಿದರು.
ಎಸ್ಎಂಕೆ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನವ್ಯಾ, ಕ್ಷೇತ್ರ ಆರೋಗ್ಯ ಕಾರ್ಯಕರ್ತ ಕೊಟ್ರೇಶ್, ಕಿರಿಯ ಆರೋಗ್ಯ ಸಹಾಯಕಿ ಮಂಜುಳಾ, ಆಶಾ ಕಾರ್ಯಕರ್ತೆ ಶೈಲಾ ಸಹಕರಿಸಿದರು.
ವಿಜಯಪುರ ಜಿಲ್ಲೆಯವರು
‘ಸುಡುಗಾಡು ಸಿದ್ಧ ಸಮುದಾಯದ ನಾವು ವಿಜಯಪುರ ಜಿಲ್ಲೆಯ ಆಲಮಟ್ಟಿ ನಿಡುಗುಂದಿಯವರು. ಊರಿಂದ ಊರಿಗೆ ಅಲೆಯುತ್ತಾ ಇಲ್ಲಿಗೆ ಬಂದಿದ್ದೇವೆ. ಕೊರೊನಾದಿಂದ ಎಲ್ಲರೂ ಕಂಗೆಟ್ಟಿದ್ದರು. ಬೇರೆಯವರಿಗೆ ಲಸಿಕೆ ಹಾಕುತ್ತಿರುವ ವಿಚಾರ ಗೊತ್ತಾಗಿ ನಮಗೂ ಹಾಕಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದೆವು. ನಮಗೆ ಕೊರೊನಾ ಲಸಿಕೆ ಸಿಕ್ಕಿತು. ಜತೆಗೆ ಮಕ್ಕಳಿಗೂ ಮಾತ್ರೆ, ಸಿರಪ್, ಇಂಜೆಕ್ಷನ್ ಕೊಟ್ಟರು’ ಎಂದು ಸಮುದಾಯದ ನಾಗಾರ್ಜುಮ, ಯಲ್ಲಪ್ಪ, ಹುಸೇನಪ್ಪ, ದೊಡ್ಡ ಹುಸೇನಪ್ಪ, ತಾಯವ್ವ, ಜಂಭಣ್ಣ ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.