ಹರಿಹರ: ಸಮುದಾಯದ ಜಾಗೃತಿ ಹಾಗೂ ಬಡವರ ಉದ್ಧಾರಕ್ಕಾಗಿ ಸ್ವಾಮೀಜಿ ಅವರು ರಾಜಧಾನಿಯವರೆಗೆ ಪಾದಯಾತ್ರೆ ಮತ್ತು ರಾಜ್ಯದಾದ್ಯಂತ ಸಂಚರಿಸಿ ನಡೆಸಿದ ಕಾರ್ಯ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಶನಿವಾರ ಆರಂಭಗೊಂಡ ವಾಲ್ಮೀಕಿ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಸಮಾಜಗಳ ಅಧ್ಯಕ್ಷರಿಗೆ ಗೌರವಿಸುವ ಮೂಲಕ ನೆಮ್ಮದಿಯ ಬದುಕಿಗೆ ಸಹಬಾಳ್ವೆ ಅಗತ್ಯ ಎಂಬ ಸಂದೇಶವನ್ನು ಸಾರಿದರು ಎಂದು ಹೇಳಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ‘ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಶ್ರೀಪೀಠದಲ್ಲಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಬಿ.ಪಿ. ಹರೀಶ್, ‘ಲಿಂಗೈಕ್ಯ ಪುಣ್ಯಾನಂದ ಪುರಿ ಅವರ ಕಠಿಣ ಹಾಗೂ ಕ್ರಾಂತಿಕಾರಕ ನಿಲುವು ಹಾಗೂ ಪ್ರಸನ್ನಾನಂದ ಸ್ವಾಮೀಜಿ ಅವರ ಪ್ರೀತಿ-ವಿಶ್ವಾಸದ ನಿಲುವು ವಾಲ್ಮೀಕಿ ಸಮುದಾಯ ಹಾಗೂ ಪೀಠವನ್ನು ರಾಜ್ಯದ ಅಗ್ರಮಾನ್ಯ ಸ್ಥಾನದಲ್ಲಿ ನಿಲ್ಲಿಸಿದೆ’ ಎಂದರು.
ಕಾರ್ಯಕ್ರಮಕ್ಕೂ ಮುನ್ನ ರಾಜನಹಳ್ಳಿಯಿಂದ ಶ್ರೀಪೀಠದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾಗಿದ ಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಹಾಗೂ ಆನೆ ಅಂಬಾರಿ ಗಮನ ಸೆಳೆದವು.
ತಾಲ್ಲೂಕಿನ ವಿವಿಧ ಸಮಾಜದ ಅಧ್ಯಕ್ಷರಿಗೆ ಜಾತ್ರಾ ಸಮಿತಿಯಿಂದ ಗೌರವಿಸಲಾಯಿತು.
ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಸಚಿವ ಶ್ರೀರಾಮುಲು ನೇತೃತ್ವ ವಹಿಸಿದ್ದರು. ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಬಸಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ತಿಪ್ಪಾರೆಡ್ಡಿ, ಎಸ್.ವಿ. ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಂ. ವಾಗೀಶ ಸ್ವಾಮಿ, ಹೇಮಾವತಿ, ಬಿ. ಅರ್ಚನಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ, ದೂಡಾ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರೂ ಇದ್ದರು. ಭಾಗವಹಿಸಿದ್ದರು.
ವಾಲ್ಮೀಕಿ ಜಾತ್ರೆಯ ಭವ್ಯ ವೇದಿಕೆ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಪ್ರಸನ್ನಾನಂದ ಸ್ವಾಮೀಜಿ ತಮ್ಮ ಅಧ್ಯಾತ್ಮ ಗುರುಗಳಾದ ಧಾರವಾಡದ ಮನಗುಂಡಿ ಗುರುಬಸವ ಮಹಾಮನೆಯ ಪಟ್ಟಾಧ್ಯಕ್ಷರಾದ ಬಸವಾನಂದ ಸ್ವಾಮೀಜಿ ಅವರ ಪಾದಗಳಿಗೆ ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.