ದಾವಣಗೆರೆ: ದಾವಣಗೆರೆ ವಿಭಾಗದ ಫ್ಯಾಕ್ಟರಿ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಕೆ.ಎಂ. ಪ್ರಥಮ್ ಅವರ ಬಳಿ ₹2.68 ಕೋಟಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿಗಳು ಎಸಿಬಿ ದಾಳಿಯ ವೇಳೆ ಪತ್ತೆಯಾಗಿವೆ.
ಬೆಂಗಳೂರಿನ ಸಂಜಯ್ ನಗರದ ಒಂದು ವಾಸದ ಮನೆ, ಒಂದು ಭವ್ಯ ಬಂಗಲೆ ಹಾಗೂ ಪ್ರಥಮ್ ಅವರ ತಾಯಿಗೆ ಸೇರಿದ ವಾಸದ ಮನೆ, ದಾವಣಗೆರೆಯ ನಗರದ ಪಿ.ಬಿ ರಸ್ತೆಯ ಹಳೆ ಅಪೂರ್ವ ಹೋಟೆಲ್ ಹಿಂಭಾಗ ಇರುವ ಫ್ಯಾಕ್ಟರಿ ಮತ್ತು ಬಾಯ್ಲರ್ ಇಲಾಖೆಯ ಮೇಲೂ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಲಾಯಿತು.
ಬೆಂಗಳೂರಿನ ಸಂಜಯ ನಗರದ ಎನ್.ಎಸ್.ಹಳ್ಳಿಯಲ್ಲಿ ₹ 55 ಲಕ್ಷದ ಮೌಲ್ಯದ ಎರಡು ನಿವೇಶನಗಳು, ಇದೇ ನಿವೇಶನದಲ್ಲಿ ಕಟ್ಟಿರುವ ₹1.30 ಕೋಟಿ ಮೌಲ್ಯದ ಒಂದು ಬಂಗಲೆ ಹಾಗೂ ಸಂಜಯ ನಗರದಲ್ಲಿ ತಾಯಿ ಪೊನ್ನಮ್ಮ ಹೆಸರಿನಲ್ಲಿರುವ ₹ 20 ಲಕ್ಷ ಮೌಲ್ಯದ ವಾಸದ ಮನೆ ಸೇರಿ ₹ 2.05 ಕೋಟಿ ಮೌಲ್ಯದ ಆಸ್ತಿಗಳು ಎಸಿಬಿ ದಾಳಿ ವೇಳೆ ಪತ್ತೆಯಾಗಿವೆ.
₹7,75,940 ಮೌಲ್ಯದ 400 ಗ್ರಾಂ ಬಂಗಾರದ ಆಭರಣ, ₹52 ಸಾವಿರ ನಗದು, ₹ 3635 ಮೌಲ್ಯದ 69 ಗ್ರಾಂ ಬೆಳ್ಳಿಯ ಆಭರಣ, ₹ 65 ಸಾವಿರ ಮೌಲ್ಯದ ಒಂದು ಆ್ಯಕ್ಟಿವಾ ಸ್ಕೂಟರ್, ₹ 10 ಲಕ್ಷ ಮೌಲ್ಯದ ಒಂದು ಬಲೆನೊ ಕಾರು, ₹ 2.50 ಲಕ್ಷದ ಒಂದು ರಾಯಲ್ ಎನ್ಫೀಲ್ಡ್ ಬೈಕ್, ₹17.50 ಲಕ್ಷ ಮೌಲ್ಯದ ಒಂದು ಮಹೀಂದ್ರಾ ಎಕ್ಸ್ಯುವಿ ಕಾರು ಹಾಗೂ ₹ 25 ಲಕ್ಷ ಮೊತ್ತದ ಗೃಹೋಪಯೋಗಿ ವಸ್ತುಗಳು ಸೇರಿ ₹ 63,96,575 ಮೌಲ್ಯದ ಚರ ಆಸ್ತಿಗಳು ಪತ್ತೆಯಾಗಿವೆ. ದಾವಣಗೆರೆಯ ಎಸಿಬಿ ಎಸ್.ಪಿ ಜಯಪ್ರಕಾಶ್ ನೇತೃತ್ವದಲ್ಲಿ ಹಾವೇರಿ ಡಿಎಸ್ಪಿ ಜೆ.ಲೋಕೇಶ್, ಚಿತ್ರದುರ್ಗ ಡಿಎಸ್ಪಿ ಬಸವರಾಜ್ ಮಗದುಮ್, ದಾವಣಗೆರೆ ಡಿಎಸ್ಪಿ ಸುಧೀರ್, ಇನ್ಸ್ಪೆಕ್ಟರ್ಗಳಾದ ಮಧುಸೂಧನ್, ರವೀಂದ್ರ, ಕುರುಬಗಟ್ಟಿ, ಪ್ರಭಾವತಿ, ಆಂಜನೇಯ, ಪ್ರವೀಣ್ಕುಮಾರ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.