ADVERTISEMENT

ಮೆಕ್ಕೆಜೋಳ ಖರೀದಿಸಿ ₹10.63 ಕೋಟಿ ವಂಚಿಸಿದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 0:55 IST
Last Updated 17 ಆಗಸ್ಟ್ 2021, 0:55 IST

ದಾವಣಗೆರೆ: ಮೆಕ್ಕೆಜೋಳ ಖರೀದಿಸಿ ನೀಡಿರುವ ₹10.63 ಕೋಟಿ ಮೊತ್ತದ ಚೆಕ್ ಬೌನ್ಸ್ ಆಗಿರುವ ಪ್ರಕರಣ ಸಂಬಂಧ ಪಯನಿಯರ್ ಫೀಡ್ಸ್ ಆ್ಯಂಡ್ ಪೌಲ್ಟ್ರಿ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್‌ನ ಪಾಲುದಾರ ನಂದಕುಮಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

2008ರಲ್ಲಿ ಹರಿಹರದ ದೋಸ್ತಾನಾ ಟ್ರೇಡರ್ಸ್‍ ಮಾಲೀಕ ಖಲೀಲ್ ದೋಸ್ತಾನಾ ಅವರ ಬಳಿ ₹ 1 ಕೋಟಿ ಮೌಲ್ಯದ ಮೆಕ್ಕೆಜೋಳವನ್ನುನಂದಕುಮಾರ ಖರೀದಿಸಿದ್ದು, ಈ ಹಣಕ್ಕಾಗಿ ನೀಡಿದ ಚೆಕ್‌ಗಳು ಬೌನ್ಸ್ ಆಗಿವೆ. ಹಲವು ದಿನಗಳು ಕಳೆದರೂ ಹಣ ನೀಡಲಿಲ್ಲ. ಖಲೀಲ್ ಅವರು ನಂದಕುಮಾರ ವಿರುದ್ಧ ಹರಿಹರದ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಚೆಕ್ ಅಮಾನ್ಯ ಪ್ರಕರಣ ದಾಖಲಿಸಿದ್ದರು.

ನಂದಕುಮಾರಗೆ ಕೋರ್ಟ್‌ 33 ಬಾರಿ ವಾರೆಂಟ್ ಜಾರಿ ಮಾಡಿದ್ದರೂ ಹಾಜರಾಗದ ಕಾರಣ ಜುಲೈ 17ರಂದು ಮತ್ತೆ ಬಂಧನ ವಾರೆಂಟ್ ಜಾರಿ ಮಾಡಿತು. ಹರಿಹರ ನಗರ ಪೊಲೀಸ್ ಠಾಣೆಯ ಪಿಎಸ್‍ಐ ಸುನೀಲ್ ತೇಲಿ ಹಾಗೂ ಸಿಬ್ಬಂದಿ ಎಎಸ್‍ಐ ಮೈಕಲ್ ಆಂಥೋನಿ, ಸತೀಶ್, ಶಿವರಾಜ್‍ ಅವರನ್ನೊಳಗೊಂಡ ತಂಡ ನಂದಕುಮಾರನನ್ನು ತಮಿಳುನಾಡಿನ ತಿರುಪುರದಲ್ಲಿ ಬಂಧಿಸಿದೆ.

ADVERTISEMENT

ಹಲವು ಕಡೆಗಳಲ್ಲಿ ವಂಚನೆ:

ನಂದಕುಮಾರನು ಹರಿಹರ ಅಲ್ಲದೆ ದಾವಣಗೆರೆ, ಹೊನ್ನಾಳಿ, ರಾಣೆಬೆನ್ನೂರು, ಹಾವೇರಿ, ಬೆಂಗಳೂರು, ಶಿವಮೊಗ್ಗ, ಕೊಟ್ಟೂರು ವರ್ತಕರಿಂದ ₹ 10.63 ಕೋಟಿಗೂ ಹೆಚ್ಚು ಮೊತ್ತದ ಮೆಕ್ಕೆಜೋಳ ಖರೀದಿಸಿ, ನೀಡಿದ ಚೆಕ್‍ಗಳು ಬೌನ್ಸ್ ಆಗಿವೆ.

‘ರಾಜ್ಯದಾದ್ಯಂತ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು. ಹೊರ ರಾಜ್ಯಗಳಲ್ಲೂ ಇದೇ ರೀತಿ ವಂಚನೆ ಮಾಡಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.