ಸಾಸ್ವೆಹಳ್ಳಿ: ಹೋಬಳಿಯಲ್ಲಿ ಯೂರಿಯಾ ಗೊಬ್ಬರದ ದಾಸ್ತಾನನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಕೊರತೆಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ತಲಾ ಎರಡು ಚೀಲಗಳಿಗೆ ಮಾತ್ರ ಗೊಬ್ಬರ ವಿತರಿಸಲು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳ ನಿರ್ದೇಶನ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಆದೇಶದ ಮೇರೆಗೆ ಗುರುವಾರ ಸಂಜೆ ಹೊನ್ನಾಳಿಯ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಸಭೆ ಕರೆದು, ಸ್ಥಳೀಯ ಅಧಿಕಾರಿಗಳು ತಕ್ಷಣವೇ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸುವಂತೆ ಸೂಚಿಸಿದರು.
ಹೋಬಳಿಯ ಎಲ್ಲಾ ಗೊಬ್ಬರದ ಅಂಗಡಿಗಳಿಗೂ ಭೇಟಿ ನೀಡಿ, ಗೊಬ್ಬರದ ಮಾಲೀಕರಿಗೆ ದಾಸ್ತಾನು ಕಡಿಮೆ ಇರುವುದರಿಂದ ಅವಶ್ಯಕತೆ ಇರುವ ರೈತರಿಗೆ ಆಧಾರ್ ಕಾರ್ಡ್ ಪಡೆದು, ಕೇವಲ ಎರಡು ಚೀಲ ಯೂರಿಯಾ ಗೊಬ್ಬರವನ್ನು ನೀಡಬೇಕು. ಯಾವುದೇ ರೀತಿಯ ಹೆಚ್ಚುವರಿ ಹಣ ಪಡೆಯದೆ ಈ ಗೊಬ್ಬರವನ್ನು ಎಲ್ಲಾ ರೈತರಿಗೂ ಸಿಗುವಂತೆ ವಿತರಿಸಬೇಕು ಎಂದು ಸೂಚಿಸಿದರು.
ಸಾಸ್ವೆಹಳ್ಳಿ ಕೃಷಿ ಅಧಿಕಾರಿ ಸಿ.ಯು.ಶಶಿಧರ್, ಉಪ ತಹಶೀಲ್ದಾರ್ ಚಂದ್ರಪ್ಪ, ಆರ್.ಐ. ದಿನೇಶ್ ಬಾಬು, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಪೊಲೀಸ್ ಸಿಬ್ಬಂದಿ ಸಿದ್ದಪ್ಪ, ಮಂಜುನಾಥ್ ಮತ್ತು ಸ್ಥಳೀಯ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.