ADVERTISEMENT

ಡಿ.ಬಿ. ಕೆರೆ ಕಾಲುವೆಗೆ ತಡೆಗೋಡೆ ಭರವಸೆ

ಪ್ರವಾಹ ಪೀಡಿತ ಬಡಾವಣೆಗಳಿಗೆ ಶಾಸಕ ರಾಮಪ್ಪ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:20 IST
Last Updated 22 ಮೇ 2022, 2:20 IST
ಹರಿಹರದ ಬೆಂಕಿನಗರ, ಕಾಳಿದಾಸ ನಗರದ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಎಸ್.ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ಪೌರಾಯುಕ್ತ ಬಸವರಾಜ್ ಐ. ಇದ್ದರು.
ಹರಿಹರದ ಬೆಂಕಿನಗರ, ಕಾಳಿದಾಸ ನಗರದ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಎಸ್.ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ಪೌರಾಯುಕ್ತ ಬಸವರಾಜ್ ಐ. ಇದ್ದರು.   

ಹರಿಹರ: ಮಳೆಗಾಲದಲ್ಲಿ ಪ್ರವಾಹದ ನೀರಿನಿಂದ ಜಲಾವೃತವಾಗುವ ಬೆಂಕಿನಗರ, ಕಾಳಿದಾಸ ನಗರ, ಗಂಗಾನಗರ, ಅಂಜುಮನ್ ಶಾದಿ ಮಹಲ್ ಮತ್ತು ಎಪಿಎಂಸಿ ಕಾಳಜಿ ಕೇಂದ್ರಕ್ಕೆ ಶಾಸಕ ಎಸ್. ರಾಮಪ್ಪ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಕಿನಗರ ಹಾಗೂ ಕಾಳಿದಾಸ ನಗರದ ಜನತೆ, ‘ಏಳೆಂಟು ವರ್ಷಗಳಿಂದ ಮಳೆಗಾಲದಲ್ಲಿ ಡಿ.ಬಿ. ಕೆರೆ ಕಾಲುವೆ ನೀರು ನಮ್ಮ ಭಾಗಕ್ಕೆ ನುಗ್ಗುತ್ತದೆ. ನೂರಾರು ಮನೆಗಳು ಜಲಾವೃತವಾಗುತ್ತವೆ. ಹಿಂದಿನ ಹಲವು ಶಾಸಕರು, ಜಿಲ್ಲಾಧಿಕಾರಿ, ನಗರಸಭೆ ಅಧಿಕಾರಿಗಳು ಸಮಸ್ಯೆ ಪರಿಹಾರದ ಭರವಸೆ ನೀಡಿ ನಂತರ ಮರೆಯುತ್ತಾರೆ’ ಎಂದು ದೂರಿದರು.

ಆಗ ರಾಮಪ್ಪ, ‘ಕಾಲುವೆ ನೀರು ಬಡಾವಣೆಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಿಸಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸುತ್ತೇನೆ. ಅವರು ಅನುದಾನ ನೀಡದಿದ್ದರೆ ನಗರಸಭೆ ಅನುದಾನದಲ್ಲೇ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ಸೂಳೆಕೆರೆಯ ಹಿನ್ನೀರು ನುಗ್ಗಿ ಅವಾಂತರ ಸೃಷ್ಟಿಸುವ ಎಪಿಎಂಸಿ ಹಿಂಭಾಗದ ಗಂಗಾನಗರಕ್ಕೆ ಭೇಟಿ ನೀಡಿದ ಶಾಸಕರಿಗೆ ಅಲ್ಲಿಯ ನಿವಾಸಿಗಳು, ‘ಒಂದು ದಶಕದಿಂದ ನಮಗೆ ಬೇರೆಡೆ ಮನೆ ನಿರ್ಮಿಸುವ ಭರವಸೆ ನೀಡಲಾಗುತ್ತಿದೆ. ಆದರೆ ಪ್ರತಿ ಮಳೆಗಾಲದಲ್ಲಿ ಕಾಳಜಿಕೇಂದ್ರದ ವಾಸದ ಶಿಕ್ಷೆ ಅನುಭವಿಸಬೇಕು. ಬಡವರ ನೋವು ಯಾರೂ ಕೇಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ರಾಮಪ್ಪ, ನಗರಸಭೆ ಪೌರಾಯುಕ್ತ ಬಸವರಾಜ್ ಐ. ಅವರಿಗೆ, ‘ಗಂಗಾನಗರ, ಬೆಂಕಿನಗರ ಮತ್ತು ಕಾಳಿದಾಸ ನಗರಕ್ಕೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣ ಹಾಗೂ ಗಂಗಾನಗರದ ಜನತೆಗೆ ಮನೆಗಳನ್ನು ನಿರ್ಮಿಸಿಕೊಡಬೇಕು’ ಎಂದು ಸೂಚಿಸಿದರು.

ನಗರಸಭೆ ಅಧ್ಯಕ್ಷರಾದ ಶಾಹೀನಾ ಬಾನು, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ, ಮುಖಂಡ ದಾದಾಪೀರ್ ಬಾನುವಳ್ಳಿ, ಜಫ್ರುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.