ADVERTISEMENT

ಭತ್ತದ ಒಕ್ಕಲಿಗೆ ಮಳೆ ಅಡ್ಡಿ | ರೈತರ ಆತಂಕ; ಮೇವಿನ ಕೊರತೆ ಕಾಡುವ ಭೀತಿ

ಜಾನುವಾರುಗಳಿಗೆ ಮೇವಿನ ಕೊರತೆ ಕಾಡುವ ಭೀತಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 5:06 IST
Last Updated 6 ಜೂನ್ 2025, 5:06 IST
ಮಲೇಬೆನ್ನೂರು– ಕುಂದೂರು ಜಿಲ್ಲಾ ಮುಖ್ಯರಸ್ತೆಯ ಭತ್ತದ ಗದ್ದೆಯಲ್ಲಿ ಭತ್ತ ಕಟಾವು ಯಂತ್ರ ಗದ್ದೆಗಿಳಿಯಲು ಆಗದೆ ಬದುವಿನಲ್ಲಿ ನಿಂತಿದೆ
ಮಲೇಬೆನ್ನೂರು– ಕುಂದೂರು ಜಿಲ್ಲಾ ಮುಖ್ಯರಸ್ತೆಯ ಭತ್ತದ ಗದ್ದೆಯಲ್ಲಿ ಭತ್ತ ಕಟಾವು ಯಂತ್ರ ಗದ್ದೆಗಿಳಿಯಲು ಆಗದೆ ಬದುವಿನಲ್ಲಿ ನಿಂತಿದೆ   

ಮಲೇಬೆನ್ನೂರು: ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸುರಿಯುತ್ತಿರುವ ಮಳೆಯು ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತದ ಕೊಯ್ಲು ಪ್ರಕ್ರಿಯೆಗೆ ಅಡ್ಡಿ ಉಂಟುಮಾಡಿದ್ದರಿಂದ ಬೆಳೆಗಾರರ ಚಿಂತೆ ಹೆಚ್ಚಿದೆ.

ಮಳೆ ಸುರಿಯುತ್ತಿರುವುದರಿಂದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಕೆಲವೆಡೆ ಭತ್ತದ ಬೆಳೆಯು ಗಾಳಿ, ಮಳೆಯ ಹೊಡೆತಕ್ಕೆ ಸಿಲುಕಿ ಚಾಪೆ ಹಾಸಿ ಕಾಳು ನೆಲದ ಪಾಲಾಗಿ ಹಾನಿಗೊಳಗಾಗಿದೆ. ತೊಯ್ದು ತೊಪ್ಪೆಯಾದ ಭತ್ತ ಕಾವು ಬಂದು ಹಾಳಾಗಿರುವುದು ರೈತರ ಆತಂಕ ಹೆಚ್ಚಿಸಿದೆ.

‘ಸತತ ಸುರಿದ ಮಳೆ ನೀರು ಗದ್ದೆಗಳಲ್ಲಿ ನಿಂತ ಕಾರಣ ಕಟಾವು ಮಾಡುವ ಯಂತ್ರ ಇಳಿಸಲು ಆಗುತ್ತಿಲ್ಲ. ಮಳೆ ಬಿಡುವು ಕೊಟ್ಟ ವೇಳೆ ಎತ್ತರ ಪ್ರದೇಶದ ಹೊಲಗಳಲ್ಲಿ ಕಟಾವು ಮಾಡಿ ಹೊಲದಿಂದ ಕಣಕ್ಕೆ ಸಾಗಿಸಲು ಕೂಡ ಆಗುತ್ತಿಲ್ಲ. ಅಂತೆಯೇ ಸಂಪೂರ್ಣ ನಷ್ಟವಾಗಿದೆ’ ಎಂದು ಹಾಲಿವಾಣದ ರೈತ ಗೊಂದೇರ ರೇವಣಸಿದ್ದಪ್ಪ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ADVERTISEMENT

‘ಮಳೆಗಾಲ ಸಂಪೂರ್ಣ ಆರಂಭವಾಗಿದ್ದರಿಂದ ಸೂರ್ಯನ ಕಣ್ಣಾಮುಚ್ಚಾಲೆ ಮುಮದುವರಿದಿದೆ. ಸೂರ್ಯ ಮೋಡದಿಂದ ಹೊರಕ್ಕೆ ಬರುತ್ತಿದ್ದಂತೆಯೇ ಆಶಾಭಾವ ಮೂಡಿದರೂ, ಕೆಲ;ವೇ ಗಮಟೆಗಳ ಅವಧಿಯಲ್ಲಿ ಮತ್ತೆ ಮಳೆ ಸುರಿಯುತ್ತದೆ. ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ. ಕಟಾವು ಮಾಡಿದ ಭತ್ತ ಒಣಗಿಸಲು ಆಗುತ್ತಿಲ್ಲ. ಭತ್ತದಲ್ಲಿ ಹೆಚ್ಚಿನ ತೇವಾಂಶ ಇದ್ದು, ವ್ಯಾಪಾರಿಗಳು ಭತ್ತ ಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ’ ಎಂದು ಅಳಲು ತೋಡಿಕೊಂಡರು ಕುಂಬಳೂರಿನ ಹನುಮಂತಪ್ಪ.

‘ಕಟಾವು ಮಾಡಿದ ಭತ್ತ ಒಣಗಿಸಲು, ಸಂಗ್ರಹಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಒಣಗಿದ ಭತ್ತದ ಹುಲ್ಲು ಹೊಲದಲ್ಲಿ ಮಳೆಗೆ ಸಿಲುಕಿ ಕೊಳೆತು ಮೇವಿನ ಕೊರತೆ ಕಾಡುವುದು ನಿಶ್ಚಿತ’ ಎಂದು ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗದ ಸಂಚಾಲಕ ಆಂಜನೇಯ ಸಂಕಷ್ಟ ಹೇಳಿಕೊಂಡರು.

ಕಟಾವು ಯಂತ್ರಗಳು ಹೊಲದ ಬದು, ರಸ್ತೆ, ಕಣಗಳಲ್ಲಿ ನಿಲುಗಡೆಯಾಗಿದ್ದು, ಮಾಲೀಕರು ಹಾಗೂ ಚಾಲಕರ ನೆಮ್ಮದಿ ಕೆಡಿಸಿದೆ.

ಬೇಸಿಗೆ ಹಂಗಾಮಿನ ಉತ್ತಮ ಇಳುವರಿ ಭತ್ತದ ಬೆಳೆ ಹಾಗೂ ಬೆಲೆ ನಿರೀಕ್ಷಿಸಿದ್ದ ಕೃಷಿಕರ ಮೊಗದಲ್ಲಿ ಆತಂಕ ಆವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.