
ಪ್ರಜಾವಾಣಿ ವಾರ್ತೆ
ಹೊನ್ನಾಳಿ: ರಾಜ್ಯಪಾಲರಿಗೆ ಜಂಟಿ ಅಧಿವೇಶನದಲ್ಲಿ ಅಗೌರವ ತೋರಿದ ಕಾಂಗ್ರೆಸ್ ಪಕ್ಷದ ಶಾಸಕರನ್ನು ಕೂಡಲೇ ವಜಾ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
ಬುಧವಾರ ತಾಲ್ಲೂಕು ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯಪಾಲರನ್ನು ದುರ್ಬಳಕೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ರಾಜ್ಯಪಾಲರ ಭಾಷಣದ ಉದ್ದೇಶ ಸರ್ಕಾರದ ಯೋಜನೆಗಳ ಪ್ರಸ್ತಾಪ, ಆಡಳಿತದ ಮುನ್ನೋಟ ಹಾಗೂ ಹಿನ್ನೋಟದ ಪ್ರಸ್ತಾಪವೇ ಹೊರತು ಕೇಂದ್ರ ಸರ್ಕಾರದ ವಿರುದ್ಧ ದೂಷಣೆ ಮಾಡಿಸುವುದಲ್ಲ ಎಂದು ಕಿಡಿಕಾರಿದರು.
ವಿಬಿ ಜಿ. ರಾಮಜ್ ಜಿ ಯೋಜನೆಗೆ ಈಗಾಗಲೇ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ನರೇಗಾ ಯೋಜನೆಯಲ್ಲಿನ ಲೋಪದೋಷಗಳನ್ನು ಒಂದಿಷ್ಟು ಮಾರ್ಪಾಡು ಮಾಡಿ ಆ ಮೂಲಕ ಕೂಲಿಕಾರ್ಮಿಕರಿಗೆ ಅನುಕೂಲಕರವಾದ ಅಂಶಗಳನ್ನು ಸೇರಿಸಿ ಈ ಯೋಜನೆ ಜಾರಿ ಮಾಡಿದ್ದಾರೆ ಎಂದರು.
ಅಬಕಾರಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಲಂಚದ ವಿಚಾರ ರಾಜ್ಯದಲ್ಲಿ ಹರಿದಾಡುತ್ತಿದ್ದು, ಇದರ ನೈತಿಕ ಹೊಣೆ ಹೊತ್ತು ಸಚಿವ ಆರ್.ಬಿ. ತಿಮ್ಮಾಪೂರ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಮುಖಂಡ ಕೆ.ಪಿ. ಕುಬೇಂದ್ರಪ್ಪ, ನೆಲಹೊನ್ನೆ ಮಂಜುನಾಥ್ ಸೇರಿದಂತೆ ಹಲವರು ಮಾತನಾಡಿದರು. ಮುಖಂಡರಾದ ಮಾರುತಿನಾಯ್ಕ, ಸುರೇಂದ್ರನಾಯ್ಕ, ಎಸ್.ಎಸ್. ಬೀರಪ್ಪ, ಕೆ.ವಿ. ಶ್ರೀಧರ್, ರಂಗನಾಥ್, ರಾಜು ಹಿರೇಮಠ್, ರಮೇಶ್ ಗೌಡ, ಕುಮಾರಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.