ದಾವಣಗೆರೆ: ‘ಬಿ.ಎಸ್.ಎನ್.ಎಲ್ ಪುನಃಶ್ಚೇತನಕ್ಕೆ ₹1.64 ಲಕ್ಷ ಕೋಟಿಯಷ್ಟು ದೊಡ್ಡ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದು, ಇದರಿಂದ ಕಂಪನಿಯನ್ನು ಸಂಪೂರ್ಣವಾಗಿ ಸುಧಾರಣೆಗೊಳಿಸಲಾಗುವುದು’ ಎಂದು ಕೇಂದ್ರ ಸಂವಹನ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ಲೋಕಸಭೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ, ‘ಯುಪಿಎ ಅವಧಿಯಲ್ಲಿ ಬಿಎಸ್ಎಲ್ಎನ್ ಫಂಡ್ ಅನ್ನು ಬೇರೆ ಕಡೆ ವರ್ಗಾಯಿಸಿದ್ದರಿಂದ ಅಧೋಗತಿಗೆ ಹೋಗಿತ್ತು. ಮೇಕ್ ಇನ್ ಇಂಡಿಯಾದಿಂದಾಗಿ 4ಜಿ ಮತ್ತು 5ಜಿ ತಂತ್ರಜ್ಞಾನವನ್ನು ದೇಶಿಯವಾಗಿ ಅಭಿವೃದ್ಧಿಗೊಳಿಸಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ 5ಜಿ ತಂತ್ರಜ್ಞಾನವನ್ನು ಹಂತ ಹಂತವಾಗಿ ದೇಶದಾದ್ಯಂತ ಅನುಷ್ಠಾನಗೊಳಿಸಲಾಗುವುದು. ಬಿ.ಎಸ್.ಎನ್.ಎಲ್ ಶೀಘ್ರವಾಗಿ ಪುನಶ್ಚೇತನಗೊಳ್ಳಲಿದೆ’ ಎಂದು ಸಚಿವರು ಉತ್ತರಿಸಿದರು.
‘ಕಳೆದ ಐದು ವರ್ಷಗಳಲ್ಲಿ ಬಿ.ಎಸ್.ಎನ್.ಎಲ್ ಸತತ ನಷ್ಟಕ್ಕೊಳಗಾಗುತ್ತಿದೆ. ಇದರಿಂದ ಅದರ ಚಂದಾದಾರರು ಬೇರೆ ಕಂಪನಿಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ಉತ್ತಮಗೊಳಿಸಲು ಹಾಗೂ ಕಂಪನಿಯ ನೌಕರರನ್ನು ರಕ್ಷಿಸುವ ಸಲುವಾಗಿ ಸರ್ಕಾರ ಏನು ಕ್ರಮ ಕೈಗೊಂಡಿದೆ’ ಎಂಬ ಪ್ರಶ್ನೆಯನ್ನು ಸಂಸದರು ಕೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.