ದಾವಣಗೆರೆ: ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ಸರಿ, ತಪ್ಪಿನ ವಿಚಾರ ಅಲ್ಲ. ಮಹಿಳೆಯರು ಜಾಗೃತಗೊಂಡಿದ್ದಾರೆ. ಅವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅದರಲ್ಲಿ ಯಶಸ್ವಿ ಆಗಲಿ ಎಂದು ಶಿವಮೂರ್ತಿ ಮುರುಘಾ ಶರಣರು ಸುದ್ದಿಗಾರರಿಗೆ ತಿಳಿಸಿದರು.
ಮಸೀದಿಗೆ ಮಹಿಳೆಯರಿಗೆ ಪ್ರವೇಶ ನೀಡಲು ನೀವು ಯಾಕೆ ಹೋರಾಟ ಮಾಡುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಶಬರಿಮಲೆ ಪ್ರವೇಶಕ್ಕೂ ನಾನು ಹೋರಾಟ ಮಾಡಿಲ್ಲ. ಮಹಿಳೆಯರೇ ಹೋರಾಟ ಮಾಡಿದ್ದಾರೆ. ಮಸೀದಿ ಪ್ರವೇಶದ ಹೋರಾಟದ ಬಗ್ಗೆ ನಾನು ಚಿಂತಿಸಿಲ್ಲ’ ಎಂದು ಉತ್ತರಿಸಿದರು.
ಲಿಂಗಾಯತ ಹೋರಾಟ ನಿರಂತರ:ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಕೂಡಲೇ ಅದನ್ನು ಹಿನ್ನಡೆ ಎಂದು ಭಾವಿಸಬೇಕಾಗಿಲ್ಲ. ಹೋರಾಟಕ್ಕೆ ಹಿನ್ನಡೆ, ಮುನ್ನಡೆ ಎಂಬುದಿಲ್ಲ. ಅದು ನಿರಂತರವಾಗಿರುತ್ತದೆ. ಲಿಂಗಾಯತ ಧರ್ಮದ ಹೋರಾಟ 900 ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದು ಮುಂದುವರಿಯಲಿದೆ ಮುರಘಾ ಶರಣರು ಸ್ಪಷ್ಟಪಡಿಸಿದರು.
ಪಂಚಪೀಠದವರು ಬಸವಣ್ಣನನ್ನು ಒಪ್ಪಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಹೋರಾಟದ ಪ್ರತಿಫಲ ಎನ್ನಬಹುದು ಎಂದರು.
ನಿರ್ಲಕ್ಷಿತರಿಗೆ ಅಸ್ಮಿತೆ, ಸ್ಥಾನಮಾನ ನೀಡಿದ ಧರ್ಮ ಬಸವಣ್ಣ ಪ್ರಣೀತ ಲಿಂಗಾಯತ ಧರ್ಮ. ಅದಕ್ಕೆ ಇತಿಹಾಸ ಇದೆ. ಆದರ್ಶ ಇದೆ. ಸೈದ್ಧಾಂತಿಕ ಸ್ಪಷ್ಟತೆ ಇದೆ. ಇಂಥ ಧರ್ಮಕ್ಕೆ ರಾಷ್ಟ್ರೀಯ ಮಾನ್ಯತೆ ಅಗತ್ಯ ಎಂದು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.