ADVERTISEMENT

ಶಾಂತನಗೌಡ ದಿಢೀರ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:23 IST
Last Updated 1 ಜುಲೈ 2022, 2:23 IST
ಹೊನ್ನಾಳಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಧೋರಣೆ ಖಂಡಿಸಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ದಿಢೀರ್ ಪ್ರತಿಭಟನೆ ನಡೆಸಿದರು.
ಹೊನ್ನಾಳಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಧೋರಣೆ ಖಂಡಿಸಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ದಿಢೀರ್ ಪ್ರತಿಭಟನೆ ನಡೆಸಿದರು.   

ಹೊನ್ನಾಳಿ: ತಹಶೀಲ್ದಾರ್‌ ಅವರ ಧೋರಣೆ ಖಂಡಿಸಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ಗುರುವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

‘ತಾಲ್ಲೂಕಿನ ದೊಡ್ಡೆರೆಹಳ್ಳಿ ಗ್ರಾಮದ ರಮೇಶಪ್ಪ ಅವರಿಗೆ 2003ರಲ್ಲಿ ಅಕ್ರಮ ಸಕ್ರಮ ಅಡಿ 1.20 ಎಕರೆ ಜಮೀನು ಮಂಜೂರಾಗಿದ್ದು, ಹಣ ಕಟ್ಟಿಸಿಕೊಂಡು ಖಾತೆ ಮತ್ತು ಪಹಣಿ ಮಾಡಿಕೊಡುವಂತೆ ತಹಶೀಲ್ದಾರ್ ಆದೇಶಿಸಿದ್ದರು. ಇದೇ ತಹಶೀಲ್ದಾರ್‌ ಅವರು ಶಾಸಕರ ಮಾತು ಕಟ್ಟಿಕೊಂಡು ಅರ್ಜಿದಾರರು ಅನುಭವದಲ್ಲಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ಅದೇ ರೀತಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಭೋವಿ ಶೇಖರಪ್ಪ ಎಂಬುವವರೂ 30 ವರ್ಷಗಳಿಂದ ಸರ್ಕಾರಿ ಜಮೀನು ಉಳುಮೆ ಮಾಡುತ್ತಿದ್ದು, ಖಾತೆ ಮತ್ತು ಪಹಣಿ ಹೊಂದಿದ್ದಾರೆ. ಆದರೂ ಅವರನ್ನು ಪದೇ ಕಚೇರಿಗೆ ಕರೆಸಿಕೊಂಡು ನೀನು ಮಂಜೂರಾತಿಗಿಂತ ಹೆಚ್ಚು ಭೂಮಿ ಹೊಂದಿದ್ದು, ಅದನ್ನು ಕೂಡಲೇ ಬಿಟ್ಟು ಕೊಡಬೇಕು ಎಂದು ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ತಹಶೀಲ್ದಾರ್ ನಡೆ ಖಂಡನೀಯ’ ಎಂದು ಕಿಡಿ ಕಾರಿದರು.

ADVERTISEMENT

ಗ್ರಾಮಲೆಕ್ಕಾಧಿಕಾರಿ ಅಮಾನತಿಗೆ ಆಗ್ರಹ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲಿ ಕುಳಿತು ಪ್ರತಿ ಅರ್ಜಿಗೆ ₹ 2 ಸಾವಿರ ಲಂಚ ಕೇಳುತ್ತಿದ್ದಾರೆ. ಮುಂಗಡವಾಗಿ ₹ 500 ಪಡೆದುಕೊಂಡಿದ್ದು, ಈ ಕುರಿತ ವಿಡಿಯೊ ಈಗಾಗಲೇ ವೈರಲ್ ಆಗಿದೆ. ಅಲ್ಲಿನ ಜನರ ದೂರು ಆಲಿಸಿ ಗ್ರಾಮಲೆಕ್ಕಾಧಿಕಾರಿಯನ್ನು ಅಮಾನತು
ಗೊಳಿಸಬೇಕು ಎಂದು ಆಗ್ರಹಿಸಿದರು.

ಉಪ ವಿಭಾಗಾಧಿಕಾರಿ ಅಮಾನತಿಗೆ ಆಗ್ರಹ: ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ತಾಲ್ಲೂಕಿನ ಮಾರಿಕೊಪ್ಪ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಈ ಹಿಂದೆ ದಾವಣಗೆರೆ ಉಪವಿಭಾಗಾಧಿಕಾರಿ ಅವರು ಮಾಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಜಿಲ್ಲಾಧಿಕಾರಿ ಅವರು ಈ ಆದೇಶವನ್ನು ರದ್ದುಪಡಿಸಬೇಕು ಹಾಗೂ ಅವರನ್ನು ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಿದರು.

ಕುಂಬಳೂರು ವಾಗೀಶ್, ಅರಕೆರೆ ಮಧುಗೌಡ, ಕ್ಯಾಸಿನಕೆರೆ ಶೇಖರಪ್ಪ, ಟೈಲರ್ ಬಸವರಾಜ್, ಕುಂಬಳೂರು ನಾರಾಯಣ್, ದಲಿತ ಮುಖಂಡ ಮಂಜಪ್ಪ, ಕೊಡತಾಳ್ ರುದ್ರೇಶ್, ದಿಡಗೂರು ರುದ್ರೇಶ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎ. ರಂಜಿತ್, ವಿನಯ್, ಎಚ್.ಬಿ. ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.