ADVERTISEMENT

ಕೆರೆಯಲ್ಲಿ ಮುಳುಗಿ ಸಾವು

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 16:34 IST
Last Updated 8 ಜೂನ್ 2019, 16:34 IST

ದಾವಣಗೆರೆ: ಇಲ್ಲಿನ ಟಿ.ವಿ. ಸ್ಟೇಷನ್ ಕೆರೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಕೆಪಿಟಿಸಿಎಲ್‌ನಲ್ಲಿ ಅಕೌಂಟ್ಸ್ ಆಫೀಸರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರಸ್ವಾಮಿ ಬಡಾವಣೆಯ ಟಿ.ಎಸ್‌. ಹಾಲೇಶಪ್ಪ (55) ಮೃತಪಟ್ಟವರು.

ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗುಂಡೇರಿ ಗ್ರಾಮದವರಾದ ಇವರು ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ಸಾಯಂಕಾಲ ಮನೆಯಿಂದ ಹೊರಗೆ ಹೋದವರು ವಾಪಸ್‌ ಬಂದಿರಲಿಲ್ಲ. ಶನಿವಾರ ಬೆಳಿಗ್ಗೆ ಟಿ.ವಿ. ಸ್ಟೇಷನ್ ಕೆರೆಯಲ್ಲಿ ಮುಳುಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ADVERTISEMENT

ಮನೆಯವರು ಬಂದು ಶವವನ್ನು ಪತ್ತೆ ಹಚ್ಚಿದ ಮೇಲೆ ಪಂಚನಾಮೆಗೆ ಕಳುಹಿಸಲಾಗಿದೆ. ಹಾಲೇಶಪ್ಪ ಅವರ ಪತ್ನಿ ಶೋಭಾ ಅವರು ಅನಾರೋಗ್ಯ ಇರುವುದಾಗಿ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.

ನಿರುದ್ಯೋಗದಿಂದ ಬೇಸತ್ತು ಆತ್ಮಹತ್ಯೆ

ದಾವಣಗೆರೆ: ಇಲ್ಲಿನ ವಿದ್ಯಾನಗರದಲ್ಲಿ ಕೆಲಸ ಸಿಗದೇ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯಾನಗರ 5ನೇ ಕ್ರಾಸ್‌ ನಿವಾಸಿ ಸಿ.ಎನ್‌.ಮಹದೇವಪ್ಪ ಅವರ ಪುತ್ರ ಈಶ್ವರ್‌ ದೇವಾ (32) ಆತ್ಮಹತ್ಯೆ ಮಾಡಿಕೊಂಡವರು. ನಿರುದ್ಯೋಗದಿಂದ ಬೇಸತ್ತಿದ್ದ ಇವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಶನಿವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಗೆ ಹಲ್ಲೆ: ದೂರು ದಾಖಲು

ದಾವಣಗೆರೆ: ಕುಡಿದು ಬಂದ ವ್ಯಕ್ತಿಯೊಬ್ಬ ತನ್ನ ಮಗ ಹಾಗೂ ಪತ್ನಿಯ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಜಗಳೂರು ತಾಲ್ಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ರೇಖಮ್ಮ ಹಲ್ಲೆಗೊಳಗಾದ ಮಹಿಳೆ. ಗುರುಮೂರ್ತಿ ಹಾಗೂ ಜಗಳೂರು ನಿವಾಸಿ ಸಿದ್ದೇಶ್‌ ಹಲ್ಲೆ ಮಾಡಿದವರು. ತೋಟದ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಗುರುಮೂರ್ತಿ ಪ್ರತಿ ದಿವಸ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಮಗನ ಬಾಯಿಗೆ ಬಟ್ಟೆ ಕಟ್ಟಿ, ಸೀಮೆ ಎಣ್ಣೆ ಸುರಿದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ರೇಖಮ್ಮ ಬಿಳಿಚೋಡು ಠಾಣೆಗೆ ದೂರು ನೀಡಿದ್ದಾರೆ.

ಜೂಜಾಟ: 6 ಮಂದಿ ಬಂಧನ

ದಾವಣಗೆರೆ: ಹರಿಹರ ಪಟ್ಟಣದ ತೆಗ್ಗಿನಕೇರಿಯಲ್ಲಿ ಜೂಜಾಟವಾಡುತ್ತಿದ್ದ 6 ಮಂದಿಯನ್ನು ಬಂಧಿಸಿರುವ ಪೊಲೀಸರು ₹2,050ಗಳನ್ನು ವಶಪಡಿಸಿಕೊಂಡಿದ್ದಾರೆ.

ಹರಿಹರದ ಸೈಯದ್‌ ಮನ್ಸೂರ್‌, ಮಹಮ್ಮದ್ ಸಮೀರ್, ಇಮ್ರಾನ್‌, ಮಹಮ್ಮದ್ ವಾಸೀಮ್, ಸುನಿಲ್‌ ಹಾಗೂ ಜಮ್ಮು ಅಲಿಯಾಸ್ ಮಹಮ್ಮದ್‌ ಗೌಸ್ ಬಂಧಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.