ದಾವಣಗೆರೆ: ಜಗಳೂರು ತಾಲ್ಲೂಕಿನ ಮಾದನಹಳ್ಳಿ ಗ್ರಾಮದ ಐದೂವರೆ ವರ್ಷದ ಬಾಲಕ ಗಗನ್ಗೆ ಶ್ರವಣದೋಷವಿದೆ. ಚಿಕಿತ್ಸೆಗೆ ಅಂದಾಜು ₹ 9 ಲಕ್ಷ ಅಗತ್ಯವಿದ್ದು, ದಾನಿಗಳು ಆರ್ಥಿಕ ನೆರವು ನೀಡಬೇಕು ಎಂದು ಬಾಲಕನ ತಂದೆ ವೀರೇಶ್ ಮನವಿ ಮಾಡಿದರು.
‘ಹುಟ್ಟಿದ ಒಂದೂವರೆ ವರ್ಷದ ಬಳಿಕ ಗಗನ್ಗೆ ಮಾತು ಬರುವುದಿಲ್ಲ ಹಾಗೂ ಕಿವಿ ಕೇಳುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂತು. ಚಿತ್ರದುರ್ಗದ ಕರ್ನಾಟಕ ಇ.ಎನ್.ಟಿ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಶ್ರವಣ ಯಂತ್ರ ಹಾಕಿದರೆ ಕೇಳಿಸಬಹುದು ಎಂದರು. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ನಾವು ಸಾಲ ಮಾಡಿ ₹ 26 ಸಾವಿರ ವೆಚ್ಚದ ಶ್ರವಣ ಯಂತ್ರವನ್ನು ಹಾಕಿಸಿದೆವು. ಆದರೆ, ದೊಡ್ಡವನಾದರೂ ಸಮಸ್ಯೆ ನಿವಾರಣೆಯಾಗಲಿಲ್ಲ. ಮೈಸೂರಿನ ಮಾನಸ ಗಂಗೋತ್ರಿ ಆಸ್ಪತ್ರೆಗೆ ತೋರಿಸಿದಾಗ ಎರಡು ವರ್ಷ ಇಲ್ಲಿಯೇ ಇದ್ದು ಥೆರಪಿ ಮಾಡಿಸಬೇಕು ಎಂದರು. ಆದರೆ, ಅಲ್ಲಿಗೆ ತಂಗಿದ್ದು ಚಿಕಿತ್ಸೆ ಕೊಡಿಸಲು ನಮ್ಮಿಂದ ಸಾಧ್ಯವಾಗಲಿಲ್ಲ’ ಎಂದು ವೀರೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
‘ಚಿತ್ರದುರ್ಗದ ಕರ್ನಾಟಕ ಇ.ಎನ್.ಟಿ ಆಸ್ಪತ್ರೆಯ ತಜ್ಞ ವೈದ್ಯರಿಗೆ ತೋರಿಸಿದಾಗ ಆರು ವರ್ಷದೊಳಗೆ ಕಾಕ್ಲೆಯರ್ ಇನ್ಪ್ಲ್ಯಾಂಟ್ ಶಸ್ತ್ರಚಿಕಿತ್ಸೆ ನಡೆಸಿದರೆ ಕಿವಿ ಕೇಳಿಸುತ್ತದೆ; ಶಸ್ತ್ರ ಚಿಕಿತ್ಸೆಗೆ ಸುಮಾರು ₹ 3 ಲಕ್ಷ ಹಾಗೂ ಯಂತ್ರಕ್ಕೆ ₹ 6 ಲಕ್ಷ ವೆಚ್ಚವಾಗಲಿದೆ ಎಂದು ವೈದ್ಯ ತಿಳಿಸಿದ್ದಾರೆ. ಇಷ್ಟು ಪ್ರಮಾಣದ ಹಣವನ್ನು ಹೊಂದಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಾನಿಗಳು ಬಾಲಕನ ತಾಯಿ ಉಮಾದೇವಿ ಅವರ ಬ್ಯಾಂಕಿನ ಖಾತೆಗೆ ಹಣ ಸಂದಾಯ ಮಾಡಬೇಕು’ ಎಂದು ವೀರೇಶ್ ಮನವಿ ಮಾಡಿದರು.
ಕೆನರಾ ಬ್ಯಾಂಕಿನ ಮಾದನಹಳ್ಳಿ ಗ್ರಾಮದ ಶಾಖೆಯ ಉಳಿತಾಯ ಖಾತೆ ಸಂಖ್ಯೆ: 0669101092124 , IFSC Code: CNRB0000669 ; ಮೊಬೈಲ್: 7338369010
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.