ದಾವಣಗೆರೆ: ಮುದ್ದಾಭೋವಿ ಕಾಲೊನಿಯು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಅವ್ಯವಸ್ಥೆಗಳ ಆಗರವಾಗಿದೆ. ಸಮಸ್ಯೆಗಳನ್ನು ಶೀಘ್ರದಲ್ಲಿ ಸರಿಪಡಿಸುವಂತೆ ಒತ್ತಾಯಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಮಂಗಳವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಈ ಕಾಲೊನಿಯಲ್ಲಿ ಕೊಳಚೆ ನೀರು ಹರಿಯುತ್ತಿಲ್ಲ. ಪೇಪರ್, ಪ್ಲಾಸ್ಟಿಕ್ಗಳಿಂದ ರಾಜ ಕಾಲುವೆ ತುಂಬಿ ಹೋಗಿದೆ. ಆಟವಾಡಲು ಹೋಗಿದ್ದ ಬಾಲಕಿಯೊಬ್ಬಳು ಚರಂಡಿಯಲ್ಲಿ ಜಾರಿ ಬಿದ್ದು ನೀರು ಕುಡಿದಿದ್ದಾಳೆ. ಬಾಲಕನೊಬ್ಬ ಸತ್ತು ಹೋಗಿದ್ದಾನೆ. ಹಂದಿ, ಸೊಳ್ಳೆಗಳ ಹಾವಳಿಯಿಂದ ಜನ ಗಂಭೀರವಾದ ಕಾಯಿಲೆಗೆ ತುತ್ತಾಗಿದ್ದಾರೆ. ಕೊಳಚೆ ಮಿಶ್ರಿತ ನೀರನ್ನೇ ಕುಡಿಯುವ ಪರಿಸ್ಥಿತಿ ಇದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಎರಡು ರಾಜಕಾಲುವೆ ಚರಂಡಿಗಳನ್ನು, ಸಣ್ಣ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಅದನ್ನು ಪುನರ್ನಿರ್ಮಾಣ ಮಾಡಬೇಕು. ಪಾಳು ಬಿದ್ದಿರುವ ಸಾರ್ವಜನಿಕ ಶೌಚಾಲಯವನ್ನು ಸರಿಪಡಿಸಬೇಕು. ದಿನಕ್ಕೊಂದು ಬಾರಿ ಸ್ವಚ್ಛಗೊಳಿಸಲು ಕೆಲಸಗಾರರನ್ನು ನೇಮಿಸಬೇಕು. ಕೊಳವೆಬಾವಿ ಕೊರೆಯಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಸರಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್ಯುಸಿಐ ಸ್ಥಳೀಯ ಘಟಕದ ಉಸ್ತುವಾರಿ ಪರಶುರಾಮ್, ನಾಗಜ್ಯೋತಿ, ಭಾರತಿ, ತಿಪ್ಪೇಸ್ವಾಮಿ, ನಸೀಮಾಭಾನು, ದಾದಾಪೀರ್, ಲಕ್ಷ್ಮಮ್ಮ, ಉಮಾಬಾಯಿ, ಸತೀಶ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.