ದಾವಣಗೆರೆ: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸಿಲಿಂಗ್ ಕೊರೊನಾ ಕಾರಣದಿಂದ ಒಂದೂವರೆ ವರ್ಷಗಳಿಂದ ನಡೆದಿರಲಿಲ್ಲ. ಮಂಗಳವಾರ ಮೊದಲ ಹಂತದ ಕೌನ್ಸಿಲಿಂಗ್ ಮುಗಿದಿದ್ದು 48 ಶಿಕ್ಷಕ–ಶಿಕ್ಷಕಿಯರು ತಮ್ಮ ಮೂಲ ಶಾಲೆಗಳಿಗೆ ತೆರಳಲು ಆದೇಶದ ಪ್ರತಿಗಳನ್ನು ಪಡೆದರು.
ಕಡ್ಡಾಯ ವರ್ಗಾವಣೆ ಮತ್ತು ಹೆಚ್ಚುವರಿಯಾಗಿ ವರ್ಗಾವಣೆಗೊಂಡಿದ್ದವರಿಗೆ ಮೂಲ ಶಾಲೆಗಳಿಗೆ ಮರಳಲು ಅವಕಾಶ ನೀಡಲಾಗಿತ್ತು. ಅದಕ್ಕಾಗಿ ಅರ್ಜಿ ಸಲ್ಲಿಸಿದ್ದವರಿಗೆ ಮಂಗಳವಾರ ದಾವಣಗೆರೆ ಕಾವೇರಮ್ಮ ಶಾಲೆಯಲ್ಲಿ ಕೌನ್ಸಿಲಿಂಗ್ ನಡೆಯಿತು. ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಅವರು ಒಟ್ಟು 48 ಮಂದಿಗೆ ಆದೇಶದ ಪ್ರತಿ ವಿತರಣೆ ಮಾಡಿದರು.
‘ದೀರ್ಘ ಅವಧಿಯ ಬಳಿಕ ಕೌನ್ಸಿಲಿಂಗ್ ಆರಂಭಗೊಂಡಿದೆ. ಮುಂದಿನ ಜನವರಿವರೆಗೂ ಕೌನ್ಸಿಲಿಂಗ್ ಮುಂದುವರಿಯಲಿದೆ. ಸಾವಿರಾರು ಮಂದಿ ಶಿಕ್ಷಕರು ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಅವರು ಬಯಸುವ ಉತ್ತಮ ಸ್ಥಳ ಸಿಗಲಿದೆ’ ಎಂದು ಹಾರೈಸಿದರು.
ಕೌನ್ಸಿಲಿಂಗ್ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ. ರಾಮಪ್ಪ, ಕಾರ್ಯದರ್ಶಿ ಪಿ.ಆರ್. ಜಗದೀಶ್, ಜಿಲ್ಲಾ ಸಂಘದ ಪ್ರತಿನಿಧಿಗಳು, ಹರಿಹರ ತಾಲ್ಲೂಕು ಅಧ್ಯಕ್ಷ ಎಚ್ ಚಂದ್ರಪ್ಪ, ಶಿಕ್ಷಣಾಧಿಕಾರಿ ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಿರಂಜನ ಮೂರ್ತಿ, ಕೊಟ್ರೇಶ್, ನೋಡಲ್ ಅಧಿಕಾರಿ ಸುರೇಶ್ ಅವರೂ ಇದ್ದರು.
ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೊಂಡಿದ್ದ ಶಿಕ್ಷಕರ ಕೌನ್ಸಿಲಿಂಗ್ ಮಂಗಳವಾರ ನಡೆಯಿತು. ಸಿಆರ್ಪಿ ಕೌನ್ಸಿಲಿಂಗ್ ನ.2ರ ಬಳಿಕ ನಡೆಯಲಿದೆ. ಬಳಿಕ ನಿಯೋಜನೆಗೊಂಡ ಶಿಕ್ಷಕರ ಕೌನ್ಸಿಲಿಂಗ್ ನಡೆಯಲಿದೆ. ಮುಂದೆ ಸಾಮಾನ್ಯ ವರ್ಗಾವಣೆ, ಅದು ಮುಗಿದ ಬಳಿಕ ಪರಸ್ಪರ (ಮ್ಯೂಚುವಲ್) ವರ್ಗಾವಣೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.