ದಾವಣಗೆರೆ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪೌರಕಾರ್ಮಿಕರು ಅಪೂರ್ವ ಸೇವೆ ಸಲ್ಲಿಸಿದ್ದಾರೆ. ಅವರ ಸಮಸ್ಯೆಗೆ ಪಾಲಿಕೆಯಿಂದ ಸಕಾರಾತ್ಮಕವಾಗಿ ಸ್ಪಂದಿಸಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.
ನಗರದ ರಾಜನಹಳ್ಳಿ ಹನುಮಂತಪ್ಪ ಮಿನಿ ಕಲ್ಯಾಣ ಮಂಟಪದಲ್ಲಿ ಬುಧವಾರ ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಕೊರೊನಾ ಯೋಧರಾಗಿ ಸೇವೆ ಸಲ್ಲಿಸಿದ ಪೌರಕಾರ್ಮಿಕರಿಗೆ ನಮನ ಸಲ್ಲಿಸಲು ಏರ್ಪಡಿಸಿದ್ದ ‘ನೆಮ್ಮದಿ ಚಿಕಿತ್ಸಾ ರಂಗ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿ ಇಡೀ ದೇಶದ ಜನತೆಯು ಮನೆಯೊಳಗೆ ಇರಬೇಕಾದರೆ, ಮನೆಯಲ್ಲಿ ಮಕ್ಕಳು ಒಳಗೊಂಡಂತೆ ಕುಟುಂಬದ ಸದಸ್ಯರನ್ನು ಬಿಟ್ಟು, ಮನೆಯಿಂದ ಹೊರ ಬಂದು ಅಪೂರ್ವ ಸೇವೆ ಸಲ್ಲಿಸಿ, ಕೊರೊನಾ ಯೋಧರಾಗಿ ಕೆಲಸ ಮಾಡಿರುವುದು ಶ್ಲಾಘನೀಯ ಎಂದರು.
‘ಪೌರಕಾರ್ಮಿಕರು ಪ್ರತಿ ದಿನವೂ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ಸಮಾಜ ಮತ್ತು ದೇಶವು ನಿಮ್ಮ ಜೊತೆಗಿದೆ. ನೀವು ಇನ್ನೂ ಅತ್ಯಂತ ಉತ್ಸಾಹದಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಕಿವಿ, ಮೂಗು, ಗಂಟಲು ತಜ್ಞ ಡಾ.ಎ.ಎಂ.ಶಿವಕುಮಾರ್, ‘ಕೊರೊನಾ ಸಂದರ್ಭದಲ್ಲಿ ವೈದರಂತೆ, ಪೊಲೀಸರಂತೆ ಪೌರಕಾರ್ಮಿಕರೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಪೌರಕಾರ್ಮಿಕರು ಇಲ್ಲದಿದ್ದರೆ, ದೇಶದ ನೈರ್ಮಲ್ಯದ ಸ್ಥಿತಿ ಊಹಿಸಲು ಸಾಧ್ಯವಿಲ್ಲ’ ಎಂದರು.
ಪಾಲಿಕೆ ಆಯುಕ್ತ ವಿಶ್ವನಾಥಪಿ. ಮುದಜ್ಜಿ, ‘ವ್ಯಕ್ತಿಯ ಜನನದಿಂದ ಮರಣದ ಒಳಗಿನ ಅವಧಿಯಲ್ಲಿ ಎಲ್ಲ ರೀತಿಯ ಸೇವೆಯನ್ನು ಪಾಲಿಕೆ ನೀಡುತ್ತಿದೆ. ಅದರಲ್ಲೂ ಪೌರಕಾರ್ಮಿಕರ ಸೇವೆ ಅನನ್ಯ. ಕೊರೊನಾ ಸಂಪೂರ್ಣ ನಿರ್ಮೂಲನೆ ಆಗುವವರೆಗೂ ಎಲ್ಲರೂ ಅತ್ಯಂತ ಜಾಗೃತರಾಗಿರಬೇಕು’ ಎಂದು ಸಲಹೆ ನೀಡಿದರು.
ರಂಗ ನಿರ್ದೇಶಕ ಸಿದ್ದರಾಜು ಎಸ್.ಎಸ್ ಅವರ ನೇತೃತ್ವದ ಕಲಾ ತಂಡವು ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರು ಸಲ್ಲಿಸಿದ ಸೇವೆಯನ್ನು ಸ್ಮರಿಸುವ ಕಿರು ನಾಟಕ ‘ಸಾಯೋ ಆಟ’ ಪ್ರದರ್ಶಿಸಲಾಯಿತು. ಪೌರಕಾರ್ಮಿಕರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಾವಿದ ಆರ್.ಟಿ. ಅರುಣಕುಮಾರ್, ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಎಚ್. ಅರಳಗುಪ್ಪಿ, ರಂಗ ನಿರ್ದೇಶಕ ಸಿದ್ದರಾಜು ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.