ADVERTISEMENT

ನಾಯಿ ಅಡ್ಡ ಬಂದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 9:57 IST
Last Updated 5 ಏಪ್ರಿಲ್ 2020, 9:57 IST

ದಾವಣಗೆರೆ: ಇಲ್ಲಿನ ಆವರಗೆರೆ 1ನೇ ಬಸ್‌ ನಿಲ್ದಾಣದ ಬಳಿ ಸಂಭವಿಸಿದ ಅಪಘಾತದಲ್ಲಿ ಪ್ರೌಢಶಾಲೆಯೊಂದರ ಪ್ರಥಮ ದರ್ಜೆ ಸಹಾಯಕರೊಬ್ಬರು ಮೃತಪಟ್ಟಿದ್ದಾರೆ.

ಆವರಗೆರೆಯ ವೀರಭದ್ರಪ್ಪ (55) ಮೃತಪಟ್ಟವರು. ಬಸ್‌ ನಿಲ್ದಾಣದ ಬಳಿ ಪಿಬಿ ರಸ್ತೆಯಲ್ಲಿ ಮೊಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ಇದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಕೆಳಗೆ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ದಾವಣಗೆರೆ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಇ–ಮೇಲ್ ಐಡಿ ಬಳಸಿ ಹಣ ವಂಚನೆ

ADVERTISEMENT

ದಾವಣಗೆರೆ: ಬೆಂಗಳೂರಿನ ವೋಲ್ಕನ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಹೆಸರಿಗೆ ಹೋಲುವಂತಹ ಇ–ಮೇಲ್ ಐಡಿಯನ್ನು ಕ್ರಿಯೇಟ್ ಮಾಡಿ ಕಂಪನಿಯ ಹಿರಿಯ ಸಹಾಯಕರೊಬ್ಬರಿಗೆ ₹ 54.700ಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹರಿಹರ ಪಟ್ಟಣದ ಚಂದ್ರಕಾಂತ ವಂಚನೆಗೆ ಒಳಗಾದವರು. ಮನೆಯಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದ ಇವರ ಇ–ಮೇಲ್‌ ಐಡಿಗೆ ಹಣ ಕಳುಹಿಸುವಂತೆ ಕೇಳಿದ್ದು, ಮೂರು ಬಾರಿ ಆತ ಹೇಳಿದ ಖಾತೆಗೆ ಹಣ ಹಾಕಿದ್ದಾರೆ. ಆನಂತರ ಕಂಪನಿಯ ಸಿಇಒಗೆ ಫೋನ್ ಮಾಡಿದಾಗ ಅವರು ಯಾವುದೇ ಮೇಲ್ ಕಳುಹಿಸಿರಲಿಲ್ಲ ಎಂದು ತಿಳಸಿದ್ದಾರೆ. ಆಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.

ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ

ನ್ಯಾಮತಿ: ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಶನಿವಾರ ನಿಷೇಧಾಜ್ಞೆ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ ರಂಗಪ್ಪ ಎಂಬಾತನನ್ನು ಬಂಧಿಸಿ ಮದ್ಯದ ಪೌಚ್, ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಸಬ್‌ಇನ್ಸ್‌ಪೆಕ್ಟರ್ ಹನುಮಂತಪ್ಪ ಎಂ. ಶಿರೀಹಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.