ADVERTISEMENT

ಮತ್ತೆ ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

91 ಮಂದಿ ಬಿಡುಗಡೆ, 52 ಹಿರಿಯರು, 9 ಮಕ್ಕಳಿಗೂ ಕೊರೊನಾ ಪಾಸಿಟಿವ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 7:37 IST
Last Updated 6 ಆಗಸ್ಟ್ 2020, 7:37 IST
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ
ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ   

ದಾವಣಗೆರೆ: ಜಿಲ್ಲೆಯಲ್ಲಿ 52 ಹಿರಿಯರು, 9 ಮಕ್ಕಳು ಸೇರಿ 224 ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ.

ಪಿ.ಜೆ. ಬಡಾವಣೆಯ 75 ವರ್ಷದ ವೃದ್ಧ ಆ.4ರಂದು ಹಾಗೂ ಹೊಂಡದ ಸರ್ಕಲ್‌ನ 62 ವರ್ಷದ ವೃದ್ಧ ಆ.1ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಇದ್ದ ಈ ಇಬ್ಬರೂ ಆ.4ರಂದು ಮೃತಪಟ್ಟಿದ್ದಾರೆ.

ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಇದ್ದ ಎಸ್‌.ಎಸ್‌. ಬಡಾವಣೆಯ 49 ವರ್ಷದ ಪುರುಷ ಜುಲೈ 31ರಂದು ಹಾಗೂ ಉಸಿರಾಟದ ಸಮಸ್ಯೆ , ಅಧಿಕ ರಕ್ತದೊತ್ತಡ, ಮಧುಮೇಹ ಇದ್ದ ಯಾತ್ರಿ ಕಂಫರ್ಟ್‌ನ 46 ವರ್ಷದ ಪುರುಷ ಆ.2ರಂದು ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಆ.3ರಂದು ನಿಧನರಾಗಿದ್ದಾರೆ.

ADVERTISEMENT

ಚನ್ನಗಿರಿ ಕತ್ತಲಗೆರೆಯ 38 ವರ್ಷದ ಪುರುಷ ಜುಲೈ 29ರಂದು ಹಾಗೂ ಇಮಾಂನಗರದ 30 ವರ್ಷದ ಮಹಿಳೆ ಜುಲೈ 27ರಂದು ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದರು. ಪುರುಷನಿಗೆ ಉಸಿರಾಟದ ಸಮಸ್ಯೆ ಮತ್ತು ರಕ್ತದೊತ್ತಡ ಇದ್ದರೆ, ಮಹಿಳೆಗೆ ಉಸಿರಾಟದ ಸಮಸ್ಯೆ ಮಾತ್ರ ಇತ್ತು. ಇಬ್ಬರೂ ಆ.4ರಂದು ಮೃತಪಟ್ಟಿದ್ದಾರೆ.

ಒಂದು ವರ್ಷದ ಮಗು ಸೇರಿ ಐವರು ಬಾಲಕರು, ನಾಲ್ವರು ಬಾಲಕಿಯರಿಗೆ ಕೊರೊನಾ ಸೋಂಕು ಬಂದಿದೆ. 90 ವರ್ಷದ ದಾಟಿದ ಇಬ್ಬರು ಸೇರಿ 37 ವೃದ್ಧರು, 15 ವೃದ್ಧೆಯರಿಗೆ ಸೋಂಕು ಇರುವುದು ಖಚಿತವಾಗಿದೆ. 18ರಿಂದ 59 ವರ್ಷದೊಳಗಿನ 83 ಪುರುಷರಿಗೆ, 80 ಮಹಿಳೆಯರಿಗೆ ವೈರಸ್‌ ತಗುಲಿದೆ.

224 ಮಂದಿಯಲ್ಲಿ ದಾವಣಗೆರೆ ತಾಲ್ಲೂಕಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. 140 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ ಅಣಜಿ, ಕಾಡಜ್ಜಿ, ನಾಗನೂರು ಮುಂತಾದ ಕೆಲವೇ ಗ್ರಾಮೀಣ ಪ್ರದೇಶಗಳಲ್ಲಿ ಬೆರಳೆಣಿಕೆಯ ಜನರಿಗೆ ಕಂಡು ಬಂದಿದ್ದರೆ, 130ಕ್ಕೂ ಅಧಿಕ ಮಂದಿ ಪಾಲಿಕೆ ವ್ಯಾಪ್ತಿಯವರಾಗಿದ್ದಾರೆ. ಬಿಡಿಸಿಎಚ್‌ನ ಇಬ್ಬರು ವಿದ್ಯಾರ್ಥಿಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಸಿಟಿ ಸೆಂಟ್ರಲ್‌ ಆಸ್ಪತ್ರೆಯ ಮೂವರು, ಪೊಲೀಸ್‌ ಕ್ವಾರ್ಟರ್ಸ್‌ನ ಒಬ್ಬರು ಸೇರಿದ್ದಾರೆ.

ಹರಿಹರ ತಾಲ್ಲೂಕಿನ 37, ಚನ್ನಗಿರಿ ತಾಲ್ಲೂಕಿನ 22, ಹೊನ್ನಾಳಿ ತಾಲ್ಲೂಕಿನ 10, ಜಗಳೂರು ತಾಲ್ಲೂಕಿನ 6 ಮಂದಿಗೆ ಕೊರೊನಾ ಬಂದಿದೆ.

ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿ ಜಿಲ್ಲೆ ರಾಣೆ ಬೆನ್ನೂರಿನ ಐವರು, ಹಿರೇಕೆರೂರಿನ ಒಬ್ಬರು, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರಿನ ತಲಾ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 2840 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ 1745 ಮಂದಿ ಗುಣಮುಖರಾಗಿದ್ದಾರೆ. 68 ಮಂದಿ ಮೃತಪಟ್ಟಿದ್ದಾರೆ. 1027 ಸಕ್ರಿಯ ಪ್ರಕರಣಗಳಿವೆ. 10 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.