ದಾವಣಗೆರೆ: ಜಿಲ್ಲೆಯಲ್ಲಿ ಅಕ್ಕಿ ದಾಸ್ತಾನು ಸಾಕಷ್ಟು ಇದೆ. ಇನ್ನೂ ಆರು ತಿಂಗಳು ಲಾಕ್ಡೌನ್ ಆದರೂ ಜಿಲ್ಲೆಯಲ್ಲಿ ಅಕ್ಕಿಯ ಸಮಸ್ಯೆ ಉದ್ಭವಿಸುವುದಿಲ್ಲ.
‘ದಾವಣಗೆರೆಯಲ್ಲಿ 46 ಅಕ್ಕಿ ಗಿರಣಿಗಳು ಇದ್ದು ಅವುಗಳಲ್ಲಿ 32 ಕಾರ್ಯಾಚರಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 55 ರೈಸ್ಮಿಲ್ಗಳು ಇವೆ. ಆದ್ದರಿಂದ ಅಕ್ಕಿಗೆ ಕೊರತೆ ಕಾಡದು. ರಾಣೆಬೆನ್ನೂರು ಹಾಗೂ ಹುಬ್ಬಳ್ಳಿಗೂ ಜಿಲ್ಲೆಯಿಂದಲೇ ಅಕ್ಕಿ ಸರಬರಾಜು ಮಾಡಬೇಕಾಗಿದ್ದು, ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.
‘ವ್ಯಾಪಾರಿಗಳು ಲಾಭದ ದೃಷ್ಟಿಯಿಂದ ದಾಸ್ತಾನು ಮಾಡಿ ಇಟ್ಟುಕೊಂಡು ಕೊರತೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಅಂಗಡಿಗಳಲ್ಲಿ ಮೂರ್ನಾಲ್ಕು ಜನ ಇರುವ ಬದಲು ಒಬ್ಬರು ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.
ವ್ಯಾಪಾರಿಗಳು ಎಪಿಎಂಸಿಗೆ ಉತ್ಪನ್ನಗಳನ್ನು ತರಬಹುದು. ಅವರಿಗೆ ಯಾವುದೇ ಪಾಸ್ ಅಗತ್ಯವಿಲ್ಲ. ದಿನಸಿ ಗೂಡ್ಸ್ ಆಟೊಗಳಿಗೆ ಪೆಟ್ರೋಲ್ ಸಿಗುತ್ತದೆ. ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಹೇಳುತ್ತಾರೆ.
ವಹಿವಾಟು ಆರಂಭ:
ಲಾಕ್ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಿರುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವಹಿವಾಟು ಆರಂಭವಾಗಿದ್ದು, ತರಕಾರಿ, ಈರುಳ್ಳಿ ಹಾಗೂ ಕೆಲವು ಉತ್ಪನ್ನಗಳು ಪ್ರಾಂಗಣಕ್ಕೆ ಅವಕವಾಗಿದ್ದು, ವ್ಯವಹಾರ ನಡೆದಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿರಲಿಲ್ಲ.
ಜಿಲ್ಲಾಧಿಕಾರಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅಕ್ಕಿ, ಬೇಳೆ, ಈರುಳ್ಳಿ, ತೆಂಗಿನಕಾಯಿ, ದಿನಸಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಪಾಸ್ ಪಡೆಯಲು ವ್ಯಾಪಾರಿಗಳು ಕಾದು ಕುಳಿತಿದ್ದರು.
‘ಎಪಿಎಂಸಿಯಲ್ಲಿ 1600 ಖರೀದಿ ಅಂಗಡಿ ಇದ್ದು, 800 ಮಂದಿ ಕಾರ್ಯಾಚರಿಸುತ್ತಿವೆ. 400 ದಲ್ಲಾಳರು ಇದ್ದು, ಅವರಲ್ಲಿ 100 ಮಂದಿ ಹಾಗೂ ಹಮಾಲರು ಸೇರಿ 2 ಸಾವಿರ ಪಾಸ್ ಬೇಕಾಗಿವೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ತರಕಾರಿ, ಈರುಳ್ಳಿ, ತೆಂಗಿನಕಾಯಿ ಹಾಗೂ ಬಾಳೆಕಾಯಿ ವ್ಯಾಪಾರಿಗಳಿಗಷ್ಟೇ 400 ಜನಕ್ಕಷ್ಟೇ ಪಾಸ್ ವಿತರಿಸಲಾಗಿದೆ’ ಎಂದು ಪ್ರಭು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.