ADVERTISEMENT

ಮಾದನಬಾವಿಯಲ್ಲಿ 40 ಎಕರೆಯಲ್ಲಿ ಟ್ರೀ ಪಾರ್ಕ್: ರೇಣುಕಾಚಾರ್ಯ

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭರವಸೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:26 IST
Last Updated 25 ನವೆಂಬರ್ 2020, 3:26 IST
ಹೊನ್ನಾಳಿಯಲ್ಲಿನ ತಮ್ಮ ನಿವಾಸದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಾಮಾಜಿಕ ವಲಯಾರಣ್ಯಾಧಿಕಾರಿ ದೇವರಾಜ್ ಅವರೊಂದಿಗೆ ಪಾರ್ಕ್ ನಿರ್ಮಾಣ ಮಾಡುವ ಕುರಿತ ನೀಲನಕ್ಷೆಯನ್ನು ಪರಿಶೀಲಿಸಿದರು.
ಹೊನ್ನಾಳಿಯಲ್ಲಿನ ತಮ್ಮ ನಿವಾಸದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಾಮಾಜಿಕ ವಲಯಾರಣ್ಯಾಧಿಕಾರಿ ದೇವರಾಜ್ ಅವರೊಂದಿಗೆ ಪಾರ್ಕ್ ನಿರ್ಮಾಣ ಮಾಡುವ ಕುರಿತ ನೀಲನಕ್ಷೆಯನ್ನು ಪರಿಶೀಲಿಸಿದರು.   

ಹೊನ್ನಾಳಿ: ಹೊನ್ನಾಳಿ-ನ್ಯಾಮತಿ ಮಧ್ಯೆ ಇರುವ ಮಾದನಬಾವಿ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಟೀ ಪಾರ್ಕ್ ನಿರ್ಮಿಸಿ ಅದಕ್ಕೆ ‘ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ‘ ಎಂದು ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಮ್ಮ ನಿವಾಸದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಜೊತೆ ಮಂಗಳವಾರ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘₹10 ಕೋಟಿ ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಿಸುವ ಉದ್ದೇಶವಿದ್ದು, ಮಾದನಬಾವಿ ಸಮೀಪದ 110 ಎಕರೆ ಅರಣ್ಯ ಪ್ರದೇಶದಲ್ಲಿ 40 ಎಕರೆಯನ್ನು ಮೀಸಲಿಡಲಾಗಿದೆ. ಈ ಪ್ರದೇಶದಲ್ಲಿ ಉದ್ಯಾನ, ಬೋಟಿಂಗ್ ವ್ಯವಸ್ಥೆ, ಮಕ್ಕಳ ಪಾರ್ಕ್ ಹಾಗೂ ಯೋಗ ಪಾರ್ಕ್ ಸೇರಿ ಬಹುತೇಕ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ’ ಎಂದರು.

‘₹10 ಕೋಟಿ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದು, ಹಂತ ಹಂತವಾಗಿ ಅನುದಾನ ಬಿಡುಗಡೆ ಯಾಗಲಿದೆ. ಈ ಸಂಬಂಧ ಈಗಾಗಲೇ ಅರಣ್ಯ ಸಚಿವ ಆನಂದ್‍ಸಿಂಗ್ ಅವರಿಗೆ ಮನವಿ ಮಾಡಿದ್ದೇನೆ’ ಎಂದರು.

ADVERTISEMENT

ವಲಯ ಅರಣ್ಯಾಧಿಕಾರಿ ದೇವರಾಜ್ ಮಾತನಾಡಿ, ‘ಈ ಬೃಹತ್ ಉದ್ಯಾನ ನಿರ್ಮಾಣವಾಗುವುದರಿಂದ ಅವಳಿ ತಾಲ್ಲೂಕಿನ ವೃದ್ದರಿಗೆ, ಮಕ್ಕಳು ಮತ್ತು ಮಹಿಳೆಯರಿಗೆ ಅನುಕೂಲವಾಗಲಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದು ಇಲ್ಲಿ ಬೋಟಿಂಗ್ ಹಾಗೂ ಮಕ್ಕಳ ಉದ್ಯಾನದಲ್ಲಿ ಕಾಲ ಕಳೆಯಬಹುದಾದ ರೀತಿಯಲ್ಲಿ ಈ ಪಾರ್ಕ್ ನಿರ್ಮಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.