ADVERTISEMENT

ತುಂಗಭದ್ರಾ ಹಳೇ ಸೇತುವೆ ಸುರಕ್ಷತೆಗೆ ಧಕ್ಕೆ

ಸಡಿಲಗೊಂಡ ಕಂಬಗಳ ಕಲ್ಲುಗಳು * ಸೇತುವೆಯ ಕಾಯಕಲ್ಪಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 15:04 IST
Last Updated 20 ಜನವರಿ 2019, 15:04 IST
ಹೊನ್ನಾಳಿ ಪಟ್ಟಣದ ಸಮೀಪ ಹರಿಯುತ್ತಿರುವ ತುಂಗಭದ್ರಾ ನದಿಗೆ ಈ ಹಿಂದೆ ನಿರ್ಮಿಸಿದ್ದ ಸೇತುವೆ ಕಂಬಗಳು ಸಡಿಲಗೊಳ್ಳುತ್ತಿರುವುದು. 
ಹೊನ್ನಾಳಿ ಪಟ್ಟಣದ ಸಮೀಪ ಹರಿಯುತ್ತಿರುವ ತುಂಗಭದ್ರಾ ನದಿಗೆ ಈ ಹಿಂದೆ ನಿರ್ಮಿಸಿದ್ದ ಸೇತುವೆ ಕಂಬಗಳು ಸಡಿಲಗೊಳ್ಳುತ್ತಿರುವುದು.    

ಹೊನ್ನಾಳಿ: ಪಟ್ಟಣದ ಸಮೀಪ ಹರಿಯುತ್ತಿರುವ ತುಂಗಭದ್ರಾ ನದಿಗೆ ಹಳೆಯ ಸೇತುವೆಯ ಕಲ್ಲುಗಳು ಸಡಿಗೊಳ್ಳುತ್ತಿವೆ. ಹೀಗಾಗಿ, ಸೇತುವೆಯ ಸುರಕ್ಷತೆಯ ಬಗ್ಗೆ ಆತಂಕ ಎದುರಾಗಿದೆ.

ವಿಶ್ವ ಶ್ರೇಷ್ಠ ಎಂಜಿನಿಯರ್‌ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯಲ್ಲಿ ಏಕಮುಖ ವಾಹನ ಸಂಚಾರಕ್ಕೆ ಮಾತ್ರ ಸಾಧ್ಯವಿತ್ತು. ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದವು. ಸೇತುವೆ ಕಿರಿದಾಗಿದ್ದರಿಂದ ವಾಹನ ಸಂಚಾರ ದಟ್ಟಣೆಯ ಸಮಸ್ಯೆಯೇ ನಿರಂತರವಾಗಿ ಕಾಡುತ್ತಿತ್ತು. ಹೀಗಾಗಿ, ಈ ಸೇತುವೆ ಮಗ್ಗುಲಲ್ಲೇ ಹೊಸ ಸೇತುವೆ ನಿರ್ಮಾಣ ನಡೆಸಲಾಗಿದೆ. ಆದರೆ, ಈ ಕಾಮಗಾರಿ ಹಳೆಯ ಸೇತುವೆಯ ಕಂಬಗಳ ಬುನಾದಿಗೆ ಧಕ್ಕೆಯುಂಟು ಮಾಡಿದೆ.

‘ಹೊಸ ಸೇತುವೆ ನಿರ್ಮಾಣದ ಸಮಯದಲ್ಲಿ ಉಳಿದ ಸಿಮೆಂಟ್ ಸ್ಲ್ಯಾಬ್‍ಗಳನ್ನು ಹಾಗೂ ಕಲ್ಲುಗಳನ್ನು ಸೇತುವೆ ಕೆಳಗೆ ಹಾಕಲಾಗಿತ್ತು. ಇದರಿಂದಾಗಿ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವಾಗ ಸ್ಲ್ಯಾಬ್‍ಗಳು ಹಳೆ ಸೇತುವೆಯ ಕಂಬಗಳಿಗೆ ತಾಕಿವೆ. ಇದರಿಂದಾಗಿ ಹಳೆಯ ಸೇತುವೆ ಕೆಳ ಭಾಗದ ಕಲ್ಲುಗಳು ಸಡಿಲಗೊಂಡಿವೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸುರೇಶ್ ಆಗ್ರಹಿಸಿದರು.

ADVERTISEMENT

‘ಹೊಸ ಸೇತುವೆ ನಿರ್ಮಾಣದ ನಂತರ ಕೆಳಗೆ ಹಾಕಿರುವ ಕಲ್ಲುಗಳನ್ನು ಹಾಗೂ ಸಿಮೆಂಟ್ ಹಾಸುಗಲ್ಲುಗಳನ್ನು ಸ್ಥಳಾಂತರಿಸಬೇಕು. ಹಾಗೂ ಹಳೆಯ ಸೇತುವೆ ಕೆಳ ಭಾಗದಲ್ಲಿ ಬಿದ್ದು ಹೋಗಿರುವ, ಸಡಿಲಗೊಂಡ ಕಲ್ಲುಗಳನ್ನು ಸರಿಪಡಿಸಿ ದುರಸ್ತಿ ಕಾರ್ಯ ಮಾಡಬೇಕು. ಸೇತುವೆಯ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನೂತನ ಸೇತುವೆ ನಿರ್ಮಾಣದ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ, ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿದ್ದ ಸೇತುವೆಗೆ ಕಾಯಕಲ್ಪ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.