ದಾವಣಗೆರೆ: ಕ್ಷಣಿಕ ಲಾಭಕ್ಕಾಗಿ ಮತ ಮಾರಿಕೊಳ್ಳದೇ ವಾಸ್ತವ ಅರಿತು ಪ್ರತಿ ಮತದಾರ ಜವಾಬ್ದಾರಿಯಿಂದ ಮತ ಚಲಾಯಿಸಿದರೆ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧಾರುಕೇಶ್ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ಮತದಾರರ ಸಾಕ್ಷರತಾ ಸಂಘ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿಗಾಗಿ ಸರ್ಕಾರ ನೀಡುವ ಅನುದಾನದ ಸದ್ಬಳಕೆಗೆ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನವು ಮತದಾರರಿಗೆ ನೀಡಿದೆ. ಅದನ್ನು ನಿರ್ದಾಕ್ಷಿಣ್ಯ, ನಿರ್ಭೀತಿಯಿಂದ ಚಲಾಯಿಸಬೇಕು ಎಂದು ತಿಳಿಸಿದರು.
ಮತದಾರರಲ್ಲಿ ತಮ್ಮ ಮತಕ್ಕೆ ಎಷ್ಟು ಬೆಲೆ ಇದೆ ಎಂಬುದರ ಪರಿಜ್ಞಾನ ಇರಬೇಕು. ಸಾಕ್ಷರತೆಯ ಜಾಗೃತಿ ಮೂಡಿಸಿದಂತೆ ಮತದಾರರಲ್ಲೂ ಅರಿವು ಮೂಡಿಸಬೇಕು. ತಮ್ಮ ಜವಾಬ್ದಾರಿಯನ್ನು ತಿಳಿದುಕೊಂಡು ಕರ್ತವ್ಯ ನಿರ್ವಹಿಸಬೇಕು. ಹಣ, ಹೆಂಡದ ಆಸೆಗೆ ಕಟ್ಟುಬಿದ್ದು, ಅಥವಾ ಯಾರದೋ ಮುಲಾಜಿಗೆ ಬಿದ್ದು ಮತ ಹಾಕಿದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕೌಶಲ ಅಧಿಕಾರಿ ಡಾ.ವಿ.ಟಿ. ಬಸವರಾಜ, ‘ಮತದಾರರು ತಮ್ಮ ಸ್ವಾಭಿಮಾನವನ್ನು ತಿಳಿದು ಆತ್ಮಸಾಕ್ಷಿಯಿಂದ ಕರ್ತವ್ಯ ನಿರ್ವಹಿಸಬೇಕು. ಮತವನ್ನು ಮಾರಿಕೊಳ್ಳುವುದನ್ನು ತಡೆಯುವವರೆಗೆ ಚುನಾವಣೆಯಲ್ಲಿ ಮಹತ್ವವೇ ಇರುವುದಿಲ್ಲ. ಇದೊಂದು ವ್ಯಾಪಾರವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿ, ‘ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ಮೆರೆದರೆ ಮಾತ್ರ ಚುನಾವಣೆಯ ಉದ್ದೇಶ ಸಾರ್ಥಕವಾಗುತ್ತದೆ’ ಎಂದರು.
ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿದರು. ಮತದಾರರ ಸಾಕ್ಷರತಾ ಸಂಘದ ಸಂಯೋಜನಾಧಿಕಾರಿ ಡಾ. ಅಶೋಕ ಕುಮಾರ ಪಾಳೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಡಾ. ಬಸವರಾಜ ಬೆನಕನಹಳ್ಳಿ ಸ್ವಾಗತಿಸಿದರು. ಡಾ. ನಾಗರಾಜ ಪ್ರಮಾಣವಚನ ಬೋಧಿಸಿದರು. ಡಾ. ಪ್ರವೀಣ್ ವಂದಿಸಿದರು. ಡಾ. ಶ್ರೀಧರ ಬಾರ್ಕಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.