ದಾವಣಗೆರೆ:ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿನ ಅಗ್ನಿಶಾಮಕ ಇಲಾಖೆಗೆ ₹ 13.50 ಲಕ್ಷ ಮೊತ್ತದ ವಾಹನ ಹಾಗೂ ಆಧುನಿಕ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅಗ್ನಿಶಾಮಕ ಇಲಾಖೆಗೆ ಶುಕ್ರವಾರ ಜಿಲ್ಲಾಡಳಿತ ಭವನ ಆವರಣದಲ್ಲಿ ಹಸ್ತಾಂತರ ಮಾಡಿದರು.
ನಂತರ ಮಾತನಾಡಿ, ‘ಯಾವುದೇ ಅನಾಹುತ ಜರುಗಿದ ಸಂದರ್ಭದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅಗ್ನಿಶಾಮಕ ಇಲಾಖೆ ಸ್ಪಂದಿಸಬೇಕು. ಅತ್ಯಾಧುನಿಕ ಸಾಧನ ಸಲಕರಣೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಆಸ್ತಿ ಹಾನಿ, ಜೀವ ಹಾನಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಮೂಲಕ ಸಾರ್ವಜನಿಕ ರಕ್ಷಣೆಗೆ ಮುಂದಾಗಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಅಗ್ನಿ ಅವಘಡಗಳು, ಕಟ್ಟಡಗಳ ಕುಸಿತ, ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ಬಳಸುವ ಸಲುವಾಗಿ ಸ್ಮಾರ್ಟ್ಸಿಟಿ ಯೋಜನೆಯಿಂದ ₹13.50 ಲಕ್ಷ ವೆಚ್ಚದಲ್ಲಿ ಒಂದು ಬೊಲೆರೊ ಜೀಪ್,ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೆಳೆದು ಹರಿಸಲು 4 ಪೋರ್ಟಬಲ್ ಪಂಪ್ಗಳು, ಪೆಟ್ರೋಲ್ ಆಪರೇಟರ್ ರೋಟರಿ ರೆಸ್ಕ್ಯೂ ಸಾ, ಫೈರ್ ಬೀಟರ್ಗಳು ಬಂದಿವೆ.
₹ 1 ಕೋಟಿ ಮೊತ್ತದ ಸಲಕರಣೆಗಳು ಇಲಾಖೆಗೆ ಮಂಜೂರಾಗಿದ್ದು, ಉಳಿದ ಸಲಕರಣೆಗಳು ಮುಂದಿನ ದಿನಗಳಲ್ಲಿ ಬರಲಿವೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಮಾಹಿತಿ ನೀಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಬಿ.ಜಿ. ಅಜಯ್ಕುಮಾರ್, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.