ದಾವಣಗೆರೆ: ಮೇಯರ್ ಚುನಾವಣೆಯಲ್ಲಿ ಪಾಲ್ಗೊಳ್ಳದ 20ನೇ ವಾರ್ಡ್ನ ಪಾಲಿಕೆ ಸದಸ್ಯೆ ಯಶೋದಾ ಉಮೇಶ್ ರಾಜೀನಾಮೆ ನೀಡಬೇಕು ಎಂದು ವಾರ್ಡ್ 20ರ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾರ್ಡ್ 20ರ ಕಾಂಗ್ರೆಸ್ ಅಧ್ಯಕ್ಷ ಶಂಕರ್, ‘ಯಶೋದಾ ಅವರು ಚುನಾವಣೆಗೆ ಗೈರಾಗಿ ಅವರನ್ನು ಗೆಲ್ಲಿಸಿದ ವಾರ್ಡ್ ಜನರಿಗೆ ಮೋಸ ಮಾಡಿದ್ದಾರೆ. ಯಾವುದೋ ಆಮಿಷಕ್ಕೆ ಬಲಿಯಾಗಿ ಅವರು ಬಿಜೆಪಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಅವರ ವರ್ತನೆಯಿಂದ ಈ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಾರ್ಡ್ ಜನರಿಗೆ ಮೋಸ ಮಾಡಿದ್ದಾರೆ ಅವರು ಕೂಡಲೇ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
‘ಅವರು ರಾಜೀನಾಮೆ ನೀಡುವವರೆಗೂ ಉಗ್ರ ಹೋರಾಟ ನಡೆಸುತ್ತೇವೆ. ಅಂತಹವರಿಗೆ ನಾಯಕರು ಮನ್ನಣೆ ನೀಡದೆ ನಿಷ್ಟಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು’ ಎಂದು ಮುಖಂಡರಾದ ಸಿ. ನಟರಾಜ್, ಅಲೆಕ್ಸಾಂಡರ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ. ಶಿವಕುಮಾರ್, ಆರ್. ರಂಗನಾಥ್, ಸಾವಿತ್ರಮ್ಮ ಇದ್ದರು.
ಯಶೋದಾ ವಿರುದ್ಧ ಆಕ್ರೋಶ:ಮೇಯರ್ ಚುನಾವಣೆಯಲ್ಲಿ ಪಾಲ್ಗೊಳ್ಳದಯಶೋದಾ ಉಮೇಶ್ ವರ್ತನೆ ಖಂಡಿಸಿ ಬುಧವಾರ ಭಾರತ್ ಕಾಲೊನಿಯ ಜನರು ಯಶೋದಾ ಹಾಗೂ ಅವರ ಪತಿ ಉಮೇಶ್ ಅವರ ಭಾವಚಿತ್ರ ಹಾಕಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡ್ ಜನರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರಿಗೂ ಶ್ರದ್ಧಾಂಜಲಿ ಎಂಬ ಭಾವಚಿತ್ರ ಹಾಕಿ ಆಕ್ರೋಶ ಹೊರಹಾಕಿದರು. ಕೆಲವರು ಅವರು ಮನೆ ಮುಂದೆ ಪ್ರತಿಭಟನೆ ನಡೆಸಲು ಮುಂದಾದಾಗ ಸ್ಥಳೀಯರು ತಡೆದು ಮನವೊಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.