ADVERTISEMENT

ಅಡಕತ್ತರಿಯಲ್ಲಿ ಬಸ್ ನಿಲ್ದಾಣದ ಶೌಚಾಲಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 6:49 IST
Last Updated 14 ಜೂನ್ 2013, 6:49 IST

ನವಲಗುಂದ: ಪುರಸಭೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಹಗ್ಗಜಗ್ಗಾಟದಿಂದಾಗಿ ಇಲ್ಲಿಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ನೀರು ಹರಿದು ಹೋಗುವ ಪೈಪ್‌ಲೈನ್‌ನಲ್ಲಿ ಕೊಳೆ ತುಂಬಿದ್ದು ನಾಗರಿಕರು ದುರ್ವಾಸನೆ ಸಹಿಸುತ್ತಲೇ ಬಸ್‌ಗೆ ಕಾಯಬೇಕಾಗದ ಪರಿಸ್ಥಿತಿ ಉಂಟಾಗಿದೆ.

ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ  ಹಲವು ವರ್ಷಗಳಿಂದ ಈ ಪೈಪ್‌ಲೈನ್ ದುರಸ್ತಿ ಕಂಡಿಲ್ಲ. ಹೀಗಾಗಿ ಶೌಚಾಲಯದಿಂದ ಹೊರಡುವ ದುರ್ವಾಸನೆ ಕಿ.ಮೀ.ದೂರದ ವರೆಗೆ ಹರಡುತ್ತಿದೆ.

ಇದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ರೋಗರುಜಿನಗಳು ಹರಡುತ್ತವೆಯೋ ಎಂಬ ಆತಂಕವೂ ಜನರನ್ನು ಕಾಡುತ್ತಿದೆ.  ಐಟಿಐ ಹಾಗೂ ಶಂಕರ ಮಹಾವಿದ್ಯಾಲಯ ಇದೇ ದಾರಿಯಲ್ಲಿ ಇದೆ. ಇಲ್ಲಿಗೆ ತೆರಳುವ  ವಿದ್ಯಾರ್ಥಿಗಳಿಗೂ ಮೂಗು ಮುಚ್ಚಿಕೊಂಡು ಹೋಗುವ ಅನಿವಾರ್ಯತೆ. ಪ್ರಯಾಣಿಕರು ಈ ಶೌಚಾಲಯವನ್ನು ಬಳಸುವುದಂತೂ ಸಾಧ್ಯವಿಲ್ಲದ ಮಾತು.

ಈ ಹಿಂದೆ ಶೌಚಾಲಯದ ದುರ್ವಾಸನೆ ತಡೆಯಲಾರದೆ ಹಲವಾರು ಸಂಘಟನೆಗಳು, ನಾಗರಿಕರು ಹೋರಾಟ ಮಾಡಿದ್ದರು. ಇದರ ಫಲವಾಗಿ ಮಾಜಿ ಶಾಸಕ ಡಾ.ಆರ್.ಬಿ. ಶಿರಿಯಣ್ಣವರ ಅವಧಿಯಲ್ಲಿ ್ಙ 10 ಲಕ್ಷ ಬಿಡುಗಡೆಯಾಗಿತ್ತು.  ಆದರೆ ಕಾಮಗಾರಿಗಳು ಸರಿಯಾಗಿ ನಡೆಯದ ಕಾರಣ ದುರ್ವಾಸನೆ ಹೋಗಲಿಲ್ಲ.

ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಸಂತೋಷ ಬ್ಯಾಳಿ ಅವರನ್ನು ಸಂಪರ್ಕಿಸಿದಾಗ ಈ ಜವಾಬ್ದಾರಿ ಕೆಎಸ್‌ಆರ್‌ಟಿಸಿಯದ್ದಾಗಿದೆ. ಸಮಸ್ಯೆಯನ್ನು ಅವರ ಗಮನಕ್ಕೆ ತರಲಾಗಿದೆ. ಆದರೆ ಅವರು ಈ ಕೆಲಸವನ್ನು ಪುರಸಭೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿಸಿದರು.

ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಇಲ್ಲ

ಈ ದುರ್ವಾಸನೆ ಸಹಿಸಿ ಸಹಿಸಿ ಸಾಕಾಗಿದೆ. ಸೊಳ್ಳೆಗಳ ಕಾಟದಿಂದ ಮಕ್ಕಳು ರೋಗ ರುಜಿನಗಳಿಗೆ ಈಡಾಗುತ್ತಿದ್ದಾರೆ. ನಿದ್ರೆ ಬರುತ್ತಿಲ್ಲ. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಹೇಳಿದರೆ ಸ್ಪಂದಿಸುತ್ತಿಲ್ಲ
-ಶಿವಾಜಿ ಕಲಾಲ

ಶೀಘ್ರ ಸ್ಪಂದಿಸಿ, ಸಮಸ್ಯೆ ಪರಿಹರಿಸಿ

ಇದು ನಾಚಿಕೆಗೇಡಿತನದ ವಿಷಯ, ಸಾರ್ವಜನಿಕರಿಗೆ ಈ ರೀತಿಯಾಗಿ ಕಷ್ಟ ಕೊಡುತ್ತಿರುವುದರಿಂದ ಯಾರೂ ಉದ್ದಾರವಾಗಲಾರರು. ಹೀಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಬೇಕು
-ಅರ್ಜುನ ಹಳೆಮನಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.