ADVERTISEMENT

ಅಡಮಾನ ಸಾಲಕ್ಕೆ ರೈತರ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 8:50 IST
Last Updated 21 ಸೆಪ್ಟೆಂಬರ್ 2011, 8:50 IST

ಹುಬ್ಬಳ್ಳಿ: ತುರ್ತು ಹಣಕಾಸಿನ ಅಗತ್ಯಕ್ಕಾಗಿ ಕೃಷಿ ಉತ್ಪನ್ನಗಳನ್ನು ಅಗ್ಗದ ಬೆಲೆಗೆ ಮಾರಿ ರೈತರು ತೊಂದರೆಗೆ ಸಿಲುಕುವುದನ್ನು  ತಪ್ಪಿಸಲು ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ ಆರಂಭಿಸಿರುವ ಅಡಮಾನ ಸಾಲ ಯೋಜನೆ ಪ್ರಯೋಜನ ಪಡೆದು ಕೊಳ್ಳಲು ಜಿಲ್ಲೆಯ ರೈತರು ಮುಂದಾಗಿಲ್ಲ.

ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಹೊರತುಪಡಿಸಿ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲೂ ರೈತರು ಅಡಮಾನ ಸಾಲ ಪಡೆಯಲು ಉತ್ಸಾಹ ತೋರಿಲ್ಲ. ಪರಿಣಾಮ, ಈ ಯೋಜನೆಯಡಿ ಜಿಲ್ಲೆಗೆ ಮೀಸಲಿಟ್ಟ ರೂ.53.75 ಲಕ್ಷ ಬಳಕೆಯಾಗದೆ ಉಳಿದಿದೆ.

ಖಾಸಗಿಯಾಗಿ ಅಥವಾ ದಲಾಲರಿಂದ ಸಾಲ ಪಡೆದು ಮರು ಪಾವತಿಸುವ ಒತ್ತಡಕ್ಕೆ ಒಳಗಾಗಿ ಸಿಕ್ಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡು ತ್ತಿದ್ದ ರೈತರ ನೆರವಿಗಾಗಿ ಕೃಷಿ ಮಾರಾಟ ಮಂಡಳಿ 1997ರಲ್ಲಿ ಈ ಯೋಜನೆ ಆರಂಭಿಸಿದೆ.

ರೈತರು ಬೆಳೆದ ಉತ್ಪನ್ನವನ್ನು ಅಡವಿಟ್ಟು ಕೊಂಡು ಅದರ ಮೌಲ್ಯದ ಶೇ 60ರಷ್ಟು ಹಣ ವನ್ನು ಯೋಜನೆಯಡಿ ಸಾಲವಾಗಿ ನೀಡ ಲಾಗು ತ್ತದೆ. ರೈತರು ಕನಿಷ್ಠ 25 ಸಾವಿರದಿಂದ ಗರಿಷ್ಠ ರೂ 2ಲಕ್ಷದವರೆಗೆ ಒಮ್ಮೆಗೆ ಸಾಲ ಪಡೆಯ ಬಹುದಾಗಿದೆ.
 
ಹೀಗೆ ಪಡೆದ ಸಾಲಕ್ಕೆ ಮೊದಲ 3 ತಿಂಗಳು ಯಾವುದೇ ಬಡ್ಡಿ ವಿಧಿಸುವುದಿಲ್ಲ. ನಂತರ ಸಾಲದ ಮಿತಿಗೆ ತಕ್ಕಂತೆ ವಾರ್ಷಿಕ ಶೇ 4ರಿಂದ 10ರವರೆಗೆ ಬಡ್ಡಿ ವಿಧಿಸಲಾಗುತ್ತದೆ. 6 ತಿಂಗಳ ಒಳಗಾಗಿ ರೈತರು ಸಾಲ ಹಿಂತಿರುಗಿಸಿ ಅಡವಿಟ್ಟ ಉತ್ಪನ್ನವನ್ನು ಬಿಡಿಸಿಕೊಳ್ಳಬಹುದಾಗಿದೆ. ಈ ಅವಧಿಯಲ್ಲಿ  ಉತ್ಪನ್ನಗಳನ್ನು ರಕ್ಷಿಸುವ ಜವಾ ಬ್ದಾರಿಯನ್ನು ಎಪಿಎಂಸಿಯೇ ಹೊರುತ್ತದೆ. ನಿಗದಿತ ಅವಧಿಯಲ್ಲಿ ರೈತರು ತಮ್ಮ ಉತ್ಪನ್ನ ಬಿಡಿಸಿ ಕೊಳ್ಳದಿದ್ದಲ್ಲಿ ಮಾರುಕಟ್ಟೆ ಸಮಿತಿಯೇ ಹರಾಜು ಹಾಕಿ ತನ್ನ ಬಾಕಿ ಮುರಿದುಕೊಂಡು ಉಳಿದ ಹಣವನ್ನು ಸಂಬಂಧಿಸಿದವರಿಗೆ ನೀಡುತ್ತದೆ.

ಅಡಮಾನ ಸಾಲ ನೀಡಲು ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆದಾಯದಲ್ಲಿ ಶೇ 5ರಷ್ಟು ಪ್ರತೀ ವರ್ಷ ಮೀಸಲಿಡಬೇಕಿದ್ದು, ಯೋಜ ನೆಯಡಿ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ರೂ 23.75 ಲಕ್ಷ, ಧಾರವಾಡದಲ್ಲಿ 19 ಲಕ್ಷ, ಕಲಘಟಗಿ ರೂ 9ಲಕ್ಷ. ಕುಂದಗೋಳ ಸಮಿತಿಯಲ್ಲಿ ರೂ 2 ಲಕ್ಷ  ಮೀಸಲಿದೆ. ಅಣ್ಣಿಗೇರಿಯಲ್ಲಿ ಆರಂಭದಿಂದಲೂ ಯಾವುದೇ ಹಣ ಮೀಸಲಿಟ್ಟಿಲ್ಲ.

ರೈತರ ನಿರಾಸಕ್ತಿ: ಅಡಮಾನ ಸಾಲ ಪಡೆಯಲು ರೈತರು ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಎನಿಸಿದ ಹುಬ್ಬಳ್ಳಿಯಲ್ಲಿ 1998ರಿಂದ 2000ದವರೆಗೆ 22 ರೈತರು ಸಾಲ ಪಡೆದಿದ್ದು, ಕಳೆದ 11 ವರ್ಷದಿಂದ ಒಬ್ಬರೂ ಅರ್ಜಿ ಸಲ್ಲಿಸಿಲ್ಲ. ಧಾರವಾಡ ಎಪಿಎಂಸಿಯಲ್ಲಿ ಈ ಬಾರಿ 11 ರೈತರು ಮಾತ್ರ ಸಾಲ ಪಡೆದಿದ್ದಾರೆ. ಕಲ ಘಟಗಿ, ಕುಂದಗೋಳದಲ್ಲಿ ಫಲಾನುಭವಿಗಳು ಬಾರದೆ ಯೋಜನೆಯ ಹಣ ಹಾಗೆಯೇ ಕೊಳೆ ಯುತ್ತಿದೆ.

ಕಾಗದ ಪತ್ರ, ಉತಾರದ (ಪಹಣಿ) ಸಮಸ್ಯೆಗೆ ಬೇಸತ್ತು ರೈತರು ಅಡಮಾನ ಸಾಲ ಪಡೆಯಲು ಹಿಂದೇಟು ಹಾಕುತ್ತಾರೆ ಎನ್ನುವ ರಾಜ್ಯ ಪಕ್ಷಾತೀತ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎಂ.ಹಣಸಿ, ಸಾಲ ಕೇಳಲು ಬರುವ ರೈತರಿಗೆ ನೂರಾರು ದಾಖಲೆಗಳ ಕೇಳುವ ಅಧಿಕಾರಿಗಳು, ಕೆಲವೆಡೆ ರೈತರ ಹೆಸರಿನಲ್ಲಿ ವರ್ತಕರಿಗೆ ಸಾಲ ನೀಡಿದ್ದಾರೆ ಎಂದು ಆರೋಪಿಸುತ್ತಾರೆ.

ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಜನಪ್ರಿಯ ವಾಗದ ಹಿನ್ನೆಲೆಯಲ್ಲಿ ಅದನ್ನು `ರೈತ ಸ್ನೇಹಿ~ಯಾಗಿ ಬದಲಾಯಿಸಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಈಗಾ ಗಲೇ ವರದಿ ಸಲ್ಲಿಸಿರುವುದಾಗಿ ಧಾರವಾಡ ಜಿಲ್ಲಾ ಕೃಷಿ ಉತ್ಪನ್ನ ಮಾರಾಟ ಇಲಾಖೆ ಉಪನಿರ್ದೇಶಕ ಗಿರೀಶ್ ಹೇಳುತ್ತಾರೆ. ಪ್ರಜಾವಾಣಿಯೊಂದಿಗೆ ಮಾತ ನಾಡಿದ ಅವರು, ಕೆಲವು ಮಾರುಕಟ್ಟೆಗಳಲ್ಲಿ ಉಗ್ರಾಣ ಸೌಲಭ್ಯವಿಲ್ಲ. ಸಂಗ್ರಹಣೆ ವೇಳೆ ಉತ್ಪ ನ್ನದ ಕಳವು ಹೊರತಾಗಿ ಹಾಳಾದರೆ ಯಾರು ಜವಾಬ್ದಾರಿ ಎಂಬ ವಿಷಯದಲ್ಲಿ ಗೊಂದಲಗಳಿವೆ. ಚಿಕ್ಕ ರೈತರಿಗೆ ತಕ್ಷಣ ತಮ್ಮ ಉತ್ಪನ್ನ ಮಾರುವ ಅನಿ ವಾರ್ಯತೆ. ಇದೆಲ್ಲಾ ಸಾಲ ಯೋಜನೆಗೆ ಹಿನ್ನಡೆ ಯಾಗಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.