ADVERTISEMENT

ಅದ್ಧೂರಿಯ ದಸರಾ ಮೂಲ ಜಂಬೂ ಸವಾರಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 6:47 IST
Last Updated 1 ಅಕ್ಟೋಬರ್ 2017, 6:47 IST

ಧಾರವಾಡ: ಇಲ್ಲಿನ ಸಾರಸ್ವತಪುರ ಗೌಳಿಗಲ್ಲಿಯ ಮಾರುತಿ ದೇವಸ್ಥಾನ ವಿಶ್ವಸ್ಥ ಮಂಡಳಿಯಿಂದ ಶನಿವಾರ ನಗರದಲ್ಲಿ ಧಾರವಾಡ ದಸರಾ ಮೂಲ ಜಂಬೂ ಸವಾರಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ನಗರದ ಜನತೆ ಜಂಬೂ ಸವಾರಿ ಮೆರವಣಿಗೆಯನ್ನು ನೋಡಿ ಆನಂದಿಸಿದರು.

ಧಾರವಾಡ ದಸರಾ ಮೂಲ ಜಂಬೂಸವಾರಿ ಮೆರವಣಿಗೆಗೆ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಮಾರುತಿ ದೇವಸ್ಥಾನದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ನಡೆದ ಉತ್ಸವ ಉದ್ಘಾಟನಾ ಸಮಾರಂಭದ ನಂತರ ಮಲ್ಲಿಕಾರ್ಜುನ ಸ್ವಾಮೀಜಿ ಅವರು, ಆಂಜನೇಯ ಮೂರ್ತಿ ಹೊತ್ತಿದ್ದ ಗಜರಾಜನಿಗೆ ಪುಷ್ಪಾರ್ಪಣೆ ಮಾಡಿದರು.

ಬಳಿಕ ಸರಸ್ವತಪುರ ಗೌಳಿಗಲ್ಲಿ ಮಾರುತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ರೈಲ್ವೆ ನಿಲ್ದಾಣ ರಸ್ತೆ, ಮಹಿಷಿ ರಸ್ತೆ, ಬಾಗಲಕೋಟ ಪೆಟ್ರೋಲ್ ಬಂಕ್, ಹೊಸಯಲ್ಲಾಪುರ, ಗಾಂಧಿಚೌಕ್, ಕಲಾಭವನ ಮಾರ್ಗವಾಗಿ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಕ್ಕೆ ಆಗಮಿಸಿ ಅಲ್ಲಿ ಮುಕ್ತಾಯಗೊಂಡಿತು.

ADVERTISEMENT

ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಗೊಂಬೆಗಳು, ಡೊಳ್ಳು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಕಲಾ ಪ್ರಕಾರಗಳು ಮೇಳದುದ್ದಕ್ಕೂ ತಮ್ಮ ಕಲೆಯ ಪ್ರದರ್ಶನ ನೀಡಿದರು. ಮಳೆಯಿಂದಾಗಿ ಕೆಲ ಕಾಲ ಮೇಳಕ್ಕೆ ಅಡಚಣೆ ಉಂಟಾಯಿತು.

ಮಳೆಗೆ ಜಗ್ಗದೆ ಕಲಾತಂಡಗಳು ಪ್ರದರ್ಶನ ನೀಡಿದರೆ, ಜನರು ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು. ನಂತರ ದುರ್ಗಾದೇವಿ ದೇವಸ್ಥಾನದಲ್ಲಿ ಅಧಿದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಬನ್ನಿ ಮುರಿಯುವ ಕಾರ್ಯ ನಡೆಯಿತು. ಕಾಂಗ್ರೆಸ್‌ ಮುಖಂಡರಾದ ಎಸ್.ಆರ್. ಮೋರೆ, ದಾನಪ್ಪ ಕಬ್ಬೇರ, ಮನೋಜ ಕರ್ಜಗಿ, ಪಾಲಿಕೆ ಸದಸ್ಯ ಬಸವರಾಜ ಮುತ್ತಳ್ಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.