ಧಾರವಾಡ: ಇಲ್ಲಿನ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಜೆ ಶಾಸಕ ಅರವಿಂದ ಬೆಲ್ಲದ ಹಮ್ಮಿಕೊಂಡಿದ್ದ, ‘ಈ ಸಂಜೆ ಅರವಿಂದ ಬೆಲ್ಲದ ಅವರೊಂದಿಗೆ‘ ಕಾರ್ಯಕ್ರಮದ ಆವರಣದಲ್ಲಿಯೇ ಬಿಜೆಪಿ ಕಾರ್ಯಕರ್ತ ರಾಜು ಕೋಟೆನ್ನವರ ತಮ್ಮ ಮಗನ ಹುಟ್ಟು ಹಬ್ಬದ ಅಂಗವಾಗಿ ಭೋಜನ ಕೂಟ ಏರ್ಪಡಿಸಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.
ಬೆಲ್ಲದ ಕಾರ್ಯಕ್ರಮ ನಡೆಯುತ್ತಿದ್ದ ದೇವಸ್ಥಾನದ ಆವರಣದಲ್ಲಿರುವ ಭೋಜನ ಕೊಠಡಿಯಲ್ಲಿ ಅಡುಗೆ ತಯಾರಿಸಲಾಗುತ್ತಿತ್ತು. ಚುನಾವಣಾಧಿಕಾರಿಗಳ ತಂಡ ಅಲ್ಲಿಗೆ ಆಗಮಿಸಿ ಅಡುಗೆ ಮಾಡುವುದನ್ನು ಕೆಲ ಹೊತ್ತು ತಡೆದಿದ್ದರು. ಅಧಿಕಾರಿಗಳ ತಂಡ ವಿಡಿಯೊ ಕೂಡ ಮಾಡಿಕೊಂಡಿದೆ.
‘ಅಂಬೇಡ್ಕರ್ ಹುಟ್ಟಿದ ದಿನವೇ ಮಗ ಹುಟ್ಟಿದ್ದಾನೆ. ಹುಟ್ಟು ಹಬ್ಬದ ಅಂಗವಾಗಿ ಭೋಜನ ಕೂಟ ಏರ್ಪಡಿಸಿದ್ದೇನೆ’ ಎಂದು ಕೋಟೆನ್ನವರ ಹೇಳಿದರು. ಜನನ ಪ್ರಮಾಣ ಪತ್ರ ನೀಡುವಂತೆ ಅಧಿಕಾರಿಗಳು ಸೂಚಿಸಿದರು. ಕೋಟೆನ್ನವರ ನೀಡಿದ ಜನನ ಪ್ರಮಾಣ ಪತ್ರ ಪರಿಶೀಲಿಸಿದ ಅಧಿಕಾರಿಗಳು, ಕಾರ್ಯಕ್ರಮ ಮುಂದುವರಿಸಲು ಅವಕಾಶ ನೀಡಿ ಹೋದರು.
ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿ, ‘ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ರಾಜು ಕೋಟೆನ್ನವರ ಭೋಜನ ಕೂಟ ಆಯೋಜಿಸಿದ್ದ ಬಗ್ಗೆ ಮಾಹಿತಿ ಇಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.