ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಕಾಂಗ್ರೆಸ್ನಿಂದ ಶಾಸಕರಾಗಿರುವ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಧಾರವಾಡ ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಛಲವಾದಿ ಯುವ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಅಂಬೇಡ್ಕರ್ ವೃತ್ತದ ಬಳಿ ಭಾನುವಾರ ಸೇರಿದ ಅಹಿಂದ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಅಬ್ಬಯ್ಯ ಅವರ ಪರ ಘೋಷಣೆ ಕೂಗಿ ‘ಮೊದಲ ಸಲ ಶಾಸಕರಾಗಿ ಆಯ್ಕೆಯಾದಾಗ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಾಕಷ್ಟು ಅನುದಾನ ತಂದುಕೊಟ್ಟಿದ್ದಾರೆ. ಮೀಸಲು ಕ್ಷೇತ್ರದಿಂದ ಗೆದ್ದಿರುವ ಅವರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ಒತ್ತಾಯಿಸಿದರು. ಯುವ ಸಮಿತಿಯವರು ಹಳೇ ಹುಬ್ಬಳ್ಳಿ ಸಿದ್ದಾರ್ಥ ಕಾಲೊನಿಯಲ್ಲಿ ಮನವಿ ಮಾಡಿದರು.
‘ಕ್ಷೇತ್ರದ ಜನರಿಗೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ರೈತರಿಗೆ ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ಉತ್ತರ ಕರ್ನಾಟಕದ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ. ಈ ಭಾಗದಲ್ಲಿ ಪಕ್ಷ ಇನ್ನಷ್ಟು ಬಲಿಷ್ಠವಾಗುತ್ತದೆ’ ಎಂದರು.
ಸಂಘಟನೆಯ ಪ್ರಮುಖರಾದ ಪ್ರಭು ಪ್ರಭಾಕರ, ರಜತ್ ಉಳ್ಳಾಗಡ್ಡಿಮಠ, ಯಮನೂರ ಜಾಧವ, ಮೆಹಮೂದ್ ಕೌಲೂರು, ಸುನೀಲ ಮರಾಠೆ, ಕಾಶಿ ಕೋಡೆ, ಶಿವ ಬೆಂಡಿಗೇರಿ, ಕಾಲು ಸಿಂಗ್, ಗಫಾರ್ ಮಣಿಯಾರ, ರಾಜೀವ ಲದ್ವಾ, ಬಸವರಾಜ ಮೆಣಸಗಿ, ಮಾರುತಿ ದೊಡ್ಡಮನಿ, ಪ್ರಸನ್ನ ಮಿರಜಕರ ಇದ್ದರು.
ಯುವ ಸಮಿತಿಯ ಸಲಹಾ ಸಮಿತಿ ಅಧ್ಯಕ್ಷ ಗುರುಪಾದ ದೇವದುರ್ಗ, ಪದಾಧಿಕಾರಿಗಳಾದ ಬಸವರಾಜ ನಾಟೇಕರ, ಸಿದ್ದಪ್ಪ ಕವಿತಾ, ಮಂಜುನಾಥ ದೇವದುರ್ಗ, ಗುರುನಾಥ ಕ್ವಾಟಿ, ರಂಗನಾಥ ಕಟ್ಟಿಮನಿ, ಗುರು ಕಾಟೆ, ಮಂಜುನಾಥ ಚಲವಾದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.