ಧಾರವಾಡ: `ಕನ್ನಡದ ಕುಲಪುರೋಹಿತ ಎಂದೇ ಖ್ಯಾತಿ ಪಡೆದಿದ್ದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಗೆ ಧುಮುಕಲು, ಬಂಗಾಳವನ್ನು ಪ್ರತ್ಯೇಕಿಸುವ ಬ್ರಿಟಿಷರ ಪ್ರಯತ್ನ ವಿರೋಧಿಸಿ ನಡೆದ ವಂಗಭಂಗ ಚಳವಳಿ ಕಾರಣವಾಗಿತ್ತು~ ಎಂದು ಹಿರಿಯ ಕವಿ ಡಾ.ಚನ್ನವೀರ ಕಣವಿ ಹೇಳಿದರು.
`ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್~ ಗುರುವಾರ ಏರ್ಪಡಿಸಿದ್ದ ಆಲೂರು ವೆಂಕಟರಾವ್ ಅವರ 132ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಇತಿಹಾಸಜ್ಞರ ದಿನಾಚರಣೆ ಕಾರ್ಯಕ್ರಮದಲ್ಲಿ ಆಲೂರರ ಕುರಿತು ವಾರ್ತಾ ಇಲಾಖೆ ಹೊರತಂದ ಸಾಕ್ಷ್ಯಚಿತ್ರದ ಸಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕರ್ನಾಟಕದ ಸರ್ವಾಂಗೀಣ ಉನ್ನತಿ~ ಎಂಬುದು ಆಲೂರರ ಮೂಲಮಂತ್ರವಾಗಿತ್ತು. ಈ ಮಾತನ್ನು ಅವರು ತಮ್ಮ `ಜೀವನ ಸ್ಮೃತಿ~ ಕೃತಿಯಲ್ಲಿ ದಾಖಲಿಸಿದ್ದಾರೆ. `ಜಯಕರ್ನಾಟಕ ಪತ್ರಿಕೆಯ~ ಗುರಿ ಕರ್ನಾಟಕ ಏಕೀಕರಣಗೊಳಿಸುವುದು ಎಂಬುದನ್ನು ಘೋಷಿಸಿದ್ದರು. ಈ ಪತ್ರಿಕೆ ಆ ಕಾಲದಲ್ಲಿ ಯಾವ ಪತ್ರಿಕೆಯಲ್ಲೂ ಇರದಷ್ಟು ಮಾಹಿತಿಯನ್ನು ಹೊಂದಿರುತ್ತಿತ್ತು.
`ನಾನು ಸಾಹಿತಿಯಲ್ಲ~ ಎನ್ನುತ್ತಲೇ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ದುಡಿದ ಅವರು, 1930ರಲ್ಲಿ ಮೈಸೂರಿನಲ್ಲಿ ನಡೆದ 16ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು. ಆದರೆ ಬೆಂಗಳೂರಿಗರಿಗೇ ಮಣೆ ಹಾಕುವ ಪದಾಧಿಕಾರಿಗಳ ವೈಖರಿ ಖಂಡಿಸಿ ಪರಷತ್ತಿಗೆ ರಾಜೀನಾಮೆಯನ್ನೂ ನೀಡಿದ್ದರು ಎಂದರು.
ಟ್ರಸ್ಟ್ನ ಸದಸ್ಯ ಪಿ.ಬಿ.ಗಾಯಿ ಟ್ರಸ್ಟ್ ಕೈಗೊಳ್ಳಬೇಕಾದ ಕಾರ್ಯಗಳನ್ನು ವಿವರಿಸಿದರು. ಸದಸ್ಯ ಕಾರ್ಯದರ್ಶಿ ಬಿ.ಡಿ.ಹಿರೇಗೌಡರ ಸ್ವಾಗತಿಸಿದರು. ಸದಸ್ಯ ದೀಪಕ ಆಲೂರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.