ADVERTISEMENT

ಉತ್ತರ ಕರ್ನಾಟಕಕ್ಕೂ ಆದ್ಯತೆ:ಎಚ್‌ಡಿಕೆ

ಮುಂದಿನ ವಾರದಲ್ಲಿ ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ: ಪಕ್ಷದ ಅಧ್ಯಕ್ಷರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 8:39 IST
Last Updated 7 ಏಪ್ರಿಲ್ 2018, 8:39 IST

ಹುಬ್ಬಳ್ಳಿ: ‘ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಯಾವತ್ತೂ ಉತ್ತರ ಕರ್ನಾಟಕವನ್ನು ಕಡೆಗಣಿಸಿಲ್ಲ. ಅದೇ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದೇನೆ’ ಎಂದು ಜೆಡಿಎಸ್‌ ರಾಜ್ಯ ಘಟಕ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾವೇರಿ ಜಿಲ್ಲೆಯಲ್ಲಿಯೂ ಉತ್ತಮ ಸ್ಪಂದನೆ ಸಿಕ್ಕಿದೆ. ಹಲವಾರು ಶಾಸಕರು ಪಕ್ಷ ಬಿಟ್ಟು ಹೋಗಿದ್ದರೂ, ಇಲ್ಲಿನ ಜನತೆ, ಕಾರ್ಯಕರ್ತರು ಪಕ್ಷದೊಂದಿಗೆ ಇದ್ದಾರೆ. ಪಕ್ಷದ ಸಂಘಟನೆ ಹಾಗೂ ಆರೋಗ್ಯದ ಕಾರಣಕ್ಕಾಗಿ ಹುಬ್ಬಳ್ಳಿಯಲ್ಲಿ ಹೆಚ್ಚು ವಾಸ್ತವ್ಯ ಮಾಡಲಾಗಿಲ್ಲ’ ಎಂದರು.

‘ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಪರಸ್ಪರ ಟೀಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಟೀಕೆಯಿಂದ ಜನರಿಗೆ ಉಪಯೋಗವಾಗುವುದಿಲ್ಲ. ನಾನೂ, ಅವರ ನಾಲ್ಕು ಪಟ್ಟು ಟೀಕೆ ಮಾಡಬಲ್ಲೆ. ಆದರೆ, ವಿಷಯಾಧಾರಿತ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಅದೇ ನಮ್ಮ ಪಕ್ಷದ ಮತ ಬ್ಯಾಂಕ್‌ ಕೂಡ’ ಎಂದು ಹೇಳಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ ವರಿಷ್ಠ ದೇವೇಗೌಡರ ಬಗ್ಗೆ ಟೀಕೆ ಮಾಡುತ್ತಾರೆ. ಈಗ ಅವರು ಕಾಂಗ್ರೆಸ್‌ ದೊಡ್ಡ ನಾಯಕರಾಗಿದ್ದಾರೆ. 2006ರ ಉಪಚುನಾವಣೆಯಲ್ಲಿ ಅವರೊಂದಿಗೆ ಕಾಂಗ್ರೆಸ್‌ನ ಎಲ್ಲ ನಾಯಕರೂ ಇದ್ದರು. ಈಗ ವಿಶ್ವನಾಥ, ಶ್ರೀನಿವಾಸ ಪ್ರಸಾದ್‌ ಅವರೊಂದಿಗೆ ಇಲ್ಲ. ಆ ಕ್ಷೇತ್ರಕ್ಕೆ ಅವರ ಕೊಡುಗೆ ಏನು? ನಾನು ಮಾಡಿದಷ್ಟೂ ಅಭಿವೃದ್ಧಿ ಕೆಲಸ ಮಾಡಿಲ್ಲ’ ಎಂದು ಟೀಕಿಸಿದರು.

ಆಲ್ಕೋಡ ಹನುಮಂತಪ್ಪ ಅವರು ಪಕ್ಷ ಬಿಡುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷ ಬಿಡುವವರನ್ನು ತಡೆಯಲು ಆಗುವು
ದಿಲ್ಲ. ಅವರಿಗೆ ಎಲ್ಲ ಅವಕಾಶ ಕಲ್ಪಿಸಿಕೊಡಲಾಗಿತ್ತು. ಲಿಂಗಸಗೂರಿನಿಂದ ಟಿಕೆಟ್‌ ಕೊಡುತ್ತೇನೆ ಎಂಬ ಭರವಸೆ ನೀಡಿರಲಿಲ್ಲ. ಸರ್ಕಾರ ಬಂದರೆ ಸಚಿವ
ರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದೆ’ ಎಂದರು.‘ಎ.ಎಸ್‌. ಪಾಟೀಲ ನಡಹಳ್ಳಿ ಅವರಿಗೆ ಪಕ್ಷಕ್ಕೆ ಬರುವಂತೆ ಆಹ್ವಾನಿಸಿರಲಿಲ್ಲ. ಅವರೇ ಸೇರ್ಪಡೆಯಾಗಿದ್ದರು.‘ಮುದ್ದೇಬಿಹಾಳದ ಅಭ್ಯರ್ಥಿ ಎಂದೂ ಅವರೇ ಘೋಷಿಸಿಕೊಂಡಿದ್ದರು. ಜತೆಗೆ ದೇವರ ಹಿಪ್ಪರಗಿಯಿಂದ ಪತ್ನಿಗೂ ಟಿಕೆಟ್‌ ಕೇಳಿದ್ದರು. ಅದನ್ನೂ ನಿರಾಕರಿಸಿರಲಿಲ್ಲ. ಏಕಾಏಕಿ ಪಕ್ಷ ಬಿಟ್ಟಿದ್ದಾರೆ. ಇತ್ತೀಚಿನ ನಾಯಕರುಗಳಲ್ಲಿ ಪಕ್ಷ ನಿಷ್ಠೆ ಕಡಿಮೆಯಾಗಿದೆ’ ಎಂದು ಟೀಕಿಸಿದರು.

ಆಯೋಗದ ವಿರುದ್ಧ ಟೀಕೆ: ‘ಪೊಲೀಸ್‌ ಭದ್ರತೆಯಲ್ಲಿ ಹಣ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಚುನಾವಣಾಧಿಕಾರಿಗಳು, ಕೋಟ್ಯಂತರ ರೂಪಾಯಿ ಸುಮ್ಮನೆ ಬಿಟ್ಟು, ಒಂದೆರಡು ಲಕ್ಷ ಮಾತ್ರ ವಶ ಪಡಿಸಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದರು.

‘ಈಗಾಗಲೇ 126 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇನೆ. ಇನ್ನೊಂದು ವಾರದಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಎನ್‌.ಎಚ್‌. ಕೋನರಡ್ಡಿ, ಮುಖಂಡ ಶಿವಾನಂದ ಅಂಬಡಗಟ್ಟಿ, ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಅಭ್ಯರ್ಥಿ ರಾಜಣ್ಣ ಕೊರವಿ, ಪಾಲಿಕೆ ಸದಸ್ಯ ಅಲ್ತಾಫ್‌ ಕಿತ್ತೂರ, ಗುರುರಾಜ ಹುಣಸಿಮರದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.