ADVERTISEMENT

ಎಂಟು ಕಟ್ಟಡಗಳ ಅತಿಕ್ರಮಣ ತೆರವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 6:00 IST
Last Updated 17 ಸೆಪ್ಟೆಂಬರ್ 2011, 6:00 IST

ಹುಬ್ಬಳ್ಳಿ: ಪಾರ್ಕಿಂಗ್ ಸ್ಥಳ ತೆರವುಗೊಳಿಸುವಂತೆ ಅಂತಿಮ ನೋಟಿಸ್ ಜಾರಿಮಾಡಲಾದ 12 ಕಟ್ಟಡಗಳಿಗೆ ಶುಕ್ರವಾರ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಭೇಟಿ ನೀಡಿ ಪರಿಶೀಲಿಸಿದರು. ಈ ಪೈಕಿ ಎಂಟು ಕಟ್ಟಡಗಳ ಮಾಲೀಕರು ತೆರವು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಉಳಿದ ನಾಲ್ಕು ಕಟ್ಟಡಗಳ ಮಾಲೀಕರಿಗೆ ಇನ್ನೂ ಎರಡು ದಿನ ಕಾಲಾವಕಾಶ ಇದ್ದು, ಅಗತ್ಯ ಎನಿಸಿದರೆ ಸೋಮವಾರ ಕಾರ್ಯಾಚರಣೆ ನಡೆಸಲಾಗುವುದು. ನಮ್ಮ ಸಿಬ್ಬಂದಿ ಎಲ್ಲ ಸಲಕರಣೆಗಳೊಂದಿಗೆ ಸನ್ನದ್ಧವಾಗಿದ್ದಾರೆ. ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಡಾ. ತ್ರಿಲೋಕಚಂದ್ರ `ಪ್ರಜಾವಾಣಿ~ಗೆ ತಿಳಿಸಿದರು.

ಪಾಲಿಕೆ ನೀಡಿದ ಅಂತಿಮ ನೋಟಿಸ್‌ಗೆ ಎಂಟು ಕಟ್ಟಡಗಳ ಮಾಲೀಕರು ಸ್ಪಂದಿಸಿ, ತೆರವು ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಶುಕ್ರವಾರ ಎಲ್ಲ ಕಟ್ಟಡಗಳನ್ನೂ ಖುದ್ದು ಪರಿಶೀಲನೆ ಮಾಡಿ ಬಂದಿದ್ದೇನೆ. ಉಳಿದ ಕಟ್ಟಡಗಳ ಮಾಲೀಕರೂ ಇದೇ ಹಾದಿ ಹಿಡಿಯುವ ವಿಶ್ವಾಸವಿದೆ. ಇಲ್ಲದಿದ್ದರೆ ಜೆಸಿಬಿಗಳಿಗೆ ಪಾಲಿಕೆ ಕೆಲಸ ಕೊಡಲಿದೆ ಎಂದು ಅವರು ಹೇಳಿದರು.

ವಾರ್ಡ್ ನಂ. 15ರ ಮುತ್ತಗಿ ಕಾಂಪ್ಲೆಕ್ಸ್, 46ರ ರೋಹಿಣಿ ಅಪಾರ್ಟ್‌ಮೆಂಟ್, 47ರ ಪಿತ್ತಾಜಿಸ್ ಮೆಡಿಕಲ್ ಶಾಪ್, ಸುಧೀರ ಶೆಟ್ಟಿ ಬಿಲ್ಡಿಂಗ್, 51ರ ಪೈ ಶಾಪ್, ವಿನಾಯಕ ಆಕಳವಾಡಿ ಬಿಲ್ಡಿಂಗ್, ಉಮಚಗಿ ಕಾಂಪ್ಲೆಕ್ಸ್, ಬಸವಾ ಅನೆಕ್ಸ್, ಗಾಯಕವಾಡ ಬಿಲ್ಡಿಂಗ್, ಕಾಮಕಾರ ಬಿಲ್ಡಿಂಗ್, ಜೋತವಾನಿ ಬಿಲ್ಡಿಂಗ್ ಹಾಗೂ ಗೌತಮ್‌ಚಂದ್ ಜೈನ್ ಬಿಲ್ಡಿಂಗ್ ಮಾಲೀಕರಿಗೆ ಪಾಲಿಕೆ ಅಂತಿಮ ನೋಟಿಸ್ ಜಾರಿಮಾಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.